ADVERTISEMENT

ದಶಮಾನೋತ್ಸವ, ಕೊಠಡಿ ಉದ್ಘಾಟನೆ 22ರಂದು

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 8:47 IST
Last Updated 19 ಜುಲೈ 2018, 8:47 IST

ಬೆಳಗಾವಿ: ‘ಶಂಕರಗೌಡ ಪಾಟೀಲ ಸಮಾಜ ಸೇವಾ ಪ್ರತಿಷ್ಠಾನದ ದಶಮಾನೋತ್ಸವ ಮತ್ತು ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮಶತಾಬ್ದಿ ಸ್ಮರಣಾರ್ಥ ಜುಲೈ 22ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ಲಾತೂರ ತಿಳಿಸಿದರು.

‘ಅಂದು ಬೆಳಿಗ್ಗೆ 8ಕ್ಕೆ ಚನ್ನಮ್ಮ ವೃತ್ತದಲ್ಲಿರುವ ಗಣಪತಿ ಮಂದಿರದಲ್ಲಿ ಪೂಜೆ, 8.30ಜ್ಕೆ ಸ್ಪಂದನಾ ಎಚ್‌ಐವಿಪೀಡಿತ ಹಾಗೂ ಅನಾಥ ಮಕ್ಕಳು, 9.30ಕ್ಕೆ ರಾಮತೀರ್ಥನಗರದ ಮಹೇಶ ಪ್ರತಿಷ್ಠಾನದ ಮಕ್ಕಳಿಗೆ ಉಪಾಹಾರ ಹಾಗೂ ಸಹಾಯಧನ ವಿತರಿಸಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬೆಳಿಗ್ಗೆ 11.30ಕ್ಕೆ ಅನಗೋಳದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ₹ 8 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕೊಠಡಿ ಉದ್ಘಾಟನೆ ನೆರವೇರಲಿದೆ. ನಂತರ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಉತ್ತರ ಹಾಗೂ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರನ್ನು ಸತ್ಕರಿಸಲಾಗುವುದು’ ಎಂದು ಹೇಳಿದರು.

ADVERTISEMENT

‘300 ಮಕ್ಕಳು ಕಲಿಯುತ್ತಿರುವ ಈ ಶಾಲೆಯನ್ನು ಪ್ರತಿಷ್ಠಾನದಿಂದ ದತ್ತು ತೆಗೆದುಕೊಳ್ಳಲಾಗಿದೆ. ಮಳೆಗಾಲದಲ್ಲಿ ಕೊಠಡಿ ಸೋರುತ್ತಿತ್ತು. ಹೀಗಾಗಿ, ಹೊಸದಾಗಿ ನಿರ್ಮಿಸಲಾಗಿದೆ. ಹಂತ ಹಂತವಾಗಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನೆರಡು ಕೊಠಡಿ ನಿರ್ಮಾಣಕ್ಕಾಗಿ ಸರ್ಕಾರದಿಂದ ₹ 22 ಲಕ್ಷ ದೊರಕಿಸಿಕೊಡಲು ಯಶಸ್ವಿಯಾಗಿದ್ದೇವೆ’ ಎಂದರು.

‘ಪ್ರತಿಷ್ಠಾನದಿಂದ ವಿವಿಧ ಸೇವಾ ಕಾರ್ಯಕ್ರಮಗಳಿಗಾಗಿ ವಾರ್ಷಿಕ ₹ 8 ಲಕ್ಷದಿಂದ ₹ 10 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಮಹಿಳೆಯರಿಗೆ ಹೊಲಿಗೆ ಯಂತ್ರಗಳು, ಕಂಪ್ಯೂಟರ್‌ಗಳು, ಸಂತ್ರಸ್ತರ ನಿಧಿಗೆ ದೇಣಿಗೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ. ಆಶ್ರಯ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಗಳ ಮನೆಯಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ಕೊಡಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವಿವಿಧ ಸಂಘಟನೆಗಳ ಮೂಲಕ ಉಚಿತವಾಗಿ 60ಸಾವಿರಕ್ಕಿಂತಲೂ ಹೆಚ್ಚಿನ ಜನರಿಗೆ ಗುರುತಿನ ಚೀಟಿಗಳನ್ನು ಕೊಡಿಸಲಾಗಿದೆ’ ಎಂದು ವಿವರಿಸಿದರು.

ಅಧ್ಯಕ್ಷ ನೀಲಕಂಠ ಮಾಸ್ತಮರಡಿ, ವಕೀಲ ಸಿ.ಟಿ. ಮಜಗಿ, ಮಲ್ಲಿಕಾರ್ಜುನ ಸತ್ತಿಗೇರಿ, ಮಲ್ಲಿಕಾರ್ಜುನ ಬಹಾದ್ದೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.