ನಾಗರಮುನ್ನೋಳಿ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವಲ್ಲಿ ‘ಪ್ರಜಾವಾಣಿ’ ದಿನಪತ್ರಿಕೆ ಮಹತ್ವದ ಪಾತ್ರ ವಹಿಸಿದೆ’ ಎಂದು ಚಿಕ್ಕೋಡಿ ಪಿಎಸ್ಐ ಬಸನಗೌಡ ನೇರ್ಲಿ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ದಿನಪತ್ರಿಕೆ ವಿತರಿಸಿ ಅವರು ಮಾತನಾಡಿದರು.
‘ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ‘ಪ್ರಜಾವಾಣಿ’ ಮಾರ್ಗದರ್ಶಿಯಂತಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಿಕ್ಸೂಚಿಯಾಗಿದೆ. ನಿಯಮಿತವಾಗಿ ದಿನಪತ್ರಿಕೆ ಓದಿದರೆ ಪ್ರಚಲಿತ ವಿದ್ಯಮಾನಗಳ ಮಾಹಿತಿ ತಿಳಿಯುತ್ತದೆ. ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಪ್ರಕಟವಾಗುವ ‘ದಿಕ್ಸೂಚಿ’ ಸಂಚಿಕೆಯನ್ನು ವಿದ್ಯಾರ್ಥಿಗಳು ಓದಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
‘ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿಗಾರಿಕೆಗೆ ಹೆಸರಾಗಿರುವ ‘ಪ್ರಜಾವಾಣಿ’ ರಾಜ್ಯದ ಜನಮನ್ನಣೆ ಗಳಿಸಿರುವ ಪ್ರತಿಷ್ಠಿತ ದಿನಪತ್ರಿಕೆ. ಐಎಎಸ್, ಐಪಿಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಈ ಪತ್ರಿಕೆಯನ್ನೇ ಓದುತ್ತಾರೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖಂಡ ರಾಘವೇಂದ್ರ ಬಡಿಗೇರ, ‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಜಾವಾಣಿ ಪ್ರತಿದಿನವೂ ವಿಶೇಷ ಕಾಳಜಿ ವಹಿಸಿದೆ. ಸುಮಾರು 76 ವರ್ಷಗಳಿಂದಲೂ ಅತ್ಯಂತ ವಿಶ್ವಾಸಾರ್ಹ ಪತ್ರಿಕೋದ್ಯಮಕ್ಕೆ ಹೆಸರಾಗಿದೆ. ಈಗಾಗಲೇ ಈ ಪತ್ರಿಕೆಯಲ್ಲಿ ಬರುವ ದಿಕ್ಸೂಚಿಯನ್ನು ಬಳಸಿಕೊಂಡು, ಹಲವರು ಉತ್ತಮ ಫಲಿತಾಂಶ ಪಡೆದಿದ್ದಾರೆ. ಮಕ್ಕಳು ಪತ್ರಿಕೆ ಓದುವುದರಿಂದ ದೈನಂದಿನ ಜಾಗತಿಕ ಸಂಗತಿಗಳು ಗೊತ್ತಾಗುತ್ತವೆ. ಅದರೊಂದಿಗೆ ‘ಪ್ರಜಾವಾಣಿ’ ಜ್ಞಾನದ ಖನಿಜವೇ ಆಗಿದೆ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮಾ ಮುಲ್ತಾನಿ, ಕಾರ್ಯದರ್ಶಿ ದೀಲಿಪ ಬಸನಾಯ್ಕ, ಅಬ್ದುಲ್ ಬಾಗವಾನ, ಎಸ್.ಆರ್.ಕುದರಗಿ ಇದ್ದರು.
ಪ್ರಜಾವಾಣಿ ಓದುವುದರಿಂದ ಜಾಗತಿಕ ವಿದ್ಯಾಮಾನಗಳ ಅರಿವಾಗುತ್ತದೆ. ಜತೆಗೆ ಶಾಲೆ– ಕಾಲೇಜು ಮಕ್ಕಳಿಗೆ ಜ್ಞಾನ ಸಿಗುತ್ತದೆ. ಪರೀಕ್ಷೆಗಳೀಗೂ ಸಹಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.