ಚನ್ನಮ್ಮನ ಕಿತ್ತೂರು: ‘ನಕಲಿ ಮೆಣಸಿನ ಬೀಜಗಳಿಂದ ಬೆಳೆದಿರುವ ಸಸಿಗಳನ್ನು ಪೂರೈಕೆ ಮಾಡಲಾಗಿದ್ದು, ಅವು ಬೆಳೆದರೂ ಹೂವು, ಕಾಯಿ ಬಿಟ್ಟಿಲ್ಲ. ಈ ಸಸಿಗಳನ್ನು ಪೂರೈಕೆ ಮಾಡಿರುವ ಫಾರ್ಮ್ ನವರ ಮೇಲೆ ಕ್ರಮ ಕೈಗೊಳ್ಳಬೇಕು. ನಮಗೆ ಪರಿಹಾರ ಕೊಡಿಸಬೇಕು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳನ್ನು ಕಡತನಾಳದ ರೈತ ಮಹಾಂತೇಶ ಕಂಬಾರ ಆಗ್ರಹಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಕಡತನಾಳದಲ್ಲಿ ಎರಡೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಸಸಿಗಳನ್ನು ನಾಟಿ ಮಾಡಲು ತುರಮರಿಯ ಮಾರುತಿ ಹೈಬತ್ತಿ ನರ್ಸರಿ ಫಾರ್ಮ್ ನಲ್ಲಿ 20 ಸಾವಿರ ತರುವುಗಳನ್ನು ತಂದೆವು. ನಾಟಿ ಮಾಡಿ 60 ದಿನಗಳು ಕಳೆದರೂ ಬೆಳೆದ ಗಿಡಗಳು ಹೂವು ಬಿಡುತ್ತಿಲ್ಲ. ಕಾಯಿ ಆಗುವ ಸೂಚನೆಯಂತೂ ಕಾಣಿಸುತ್ತಿಲ್ಲ’ ಎಂದು ದೂರಿದರು.
‘ಫಾರ್ಮನವರನ್ನು ಕೇಳಿದರೆ ಒಮ್ಮೊಮ್ಮೆ ಹೀಗೆ ಆಗುತ್ತವೆ. ಏನೂ ಮಾಡಲು ಬರುವುದಿಲ್ಲ. ಕಾಯಿ ಆಗದ ಬಗ್ಗೆ ಮಾತನಾಡದೆ ಸುಮ್ಮನಿರಬೇಕು’ ಎಂದು ನಮಗೇ ವಾಪಸು ಹೇಳುತ್ತಿದ್ದಾರೆ. ಅಸಲಿಗೆ ಅವರೇ ನಮಗೆ ಮೋಸ ಮಾಡಿ ಸುಮ್ಮನಿರಬೇಕು ಎಂದು ಹೇಳುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.
‘ಎರಡೂವರೆ ಎಕರೆ ಪ್ರದೇಶದಲ್ಲಿ ತರುವು ನಾಟಿ ಮಾಡಲು ಒಂದೂವರೆ ಲಕ್ಷ ಖರ್ಚು ಮಾಡಿದ್ದೇವೆ. ಎರಡು ತಿಂಗಳಿಂದ ಹೊಲದಲ್ಲಿ ಕೆಲಸ ಮಾಡಿದ್ದೇವೆ. ಈ ವೆಚ್ಚ ಮತ್ತು ಶ್ರಮಕ್ಕೆ ಬೆಲೆ ಇಲ್ಲವೇ’ ಎಂದು ಕೇಳಿದರು.
‘ನಕಲಿ ಸಸಿ ಪೂರೈಕೆ ಮಾಡಿದ ನರ್ಸರಿ ಫಾರ್ಮನವರ ಮೇಲೆ ತೋಟಗಾರಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅವರಿಂದ ಪರಿಹಾರ ಕೊಡಿಸಬೇಕು’ ಎಂದು ಆಗ್ರಹಿಸಿದರು.
ಮೆಣಸಿನ ಸಸಿ ನಾಟಿ ಮಾಡಿರುವ ಕಡತನಾಳ ಗ್ರಾಮದ ರೈತರ ಗದ್ದೆಗೆ ತಜ್ಞರು ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಅವರು ವರದಿ ನೀಡಿದ ನಂತರ ಮಾಹಿತಿ ತಿಳಿಯಲಿದೆ.ಶೀಲಾ ಮುರಗೋಡ ಸಹಾಯಕ ನಿರ್ದೇಶಕಿ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.