ADVERTISEMENT

‘ಯಡಿಯೂರಪ್ಪ ಪದಚ್ಯುತಿ ಬೇಡಿಕೆ ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 14:29 IST
Last Updated 16 ಜೂನ್ 2021, 14:29 IST
ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ಶಿವಾನಂದ ಶಿವಾಚಾರ್ಯ ಸ್ವಾಮೀಜಿ   

ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪದಚ್ಯುತಿಗಾಗಿ ಬಿಜೆಪಿ ಪಕ್ಷದಲ್ಲೇ ಪ್ರಯತ್ನ ಮುಂದುವರಿದಿರುವುದು ಖೇದಕರ ಸಂಗತಿಯಾಗಿದೆ’ ಎಂದು ತಾಲ್ಲೂಕಿನ ಮುತ್ನಾಳದಲ್ಲಿರುವ ಕೇದಾರ ಶಾಖಾ ಮಠವಾದ ಹಿರೇಮಠದ ಪೀಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ, ಕೊರೊನಾದಂತಹ ವಿಷಮ ಸಂದರ್ಭದಲ್ಲಿ ಸ್ವಪಕ್ಷೀಯರಿಂದಲೇ ಅಪ್ರಬುದ್ಧ ಬೇಡಿಕೆ ಬಂದಿರುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಕೋವಿಡ್ ನಿಯಂತ್ರಣದ ಸವಾಲನ್ನು ಸಮರ್ಥವಾಗಿ ಎದುರಿಸಲು ಎಲ್ಲರೂ ಮೊದಲ ಆದ್ಯತೆ ನೀಡಬೇಕಾಗಿದೆ’ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಯಡಿಯೂರಪ್ಪ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ತಮ್ಮ ಸಂಘಟನಾ ಸಾಮರ್ಥ್ಯದ ಮೂಲಕ ವೀರಶೈವ-ಲಿಂಗಾಯತ ಸಮುದಾಯದ ಬಹು ದೊಡ್ಡ ಮತ ಬ್ಯಾಂಕನ್ನು ಬಿಜೆಪಿಗೆ ಸೃಷ್ಟಿಸಿ ಕೊಟ್ಟಿದ್ದಾರೆ. ಇದನ್ನು ಆ ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಪರಿಗಣಿಸಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಒಂದು ವೇಳೆ ಅಧಿಕಾರ ದಾಹಿಗಳು ಹಾಗೂ ಸಮಯ ಸಾಧಕರ ಒತ್ತಡಕ್ಕೆ ಮಣಿದು ತಪ್ಪು ನಿರ್ಧಾರ ಕೈಗೊಂಡರೆ ಮುಂದೆ ಇದರಿಂದ ವ್ಯತಿರಿಕ್ತ ರಾಜಕೀಯ ಪರಿಣಾಮ ಆದೀತು’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.