ADVERTISEMENT

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 19:10 IST
Last Updated 8 ಮಾರ್ಚ್ 2011, 19:10 IST

ನೆಲಮಂಗಲ: ಸ್ಥಳೀಯ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಶಾಸಕರ ಅನುಪಸ್ಥಿತಿಯಿಂದ ಕುಂಠಿತವಾಗಿಲ್ಲ ನಿರಂತರವಾಗಿ ನಡೆಯುತ್ತಿವೆ, ಯಂಟಗಾನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಅಗತ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ರೂ.18ಲಕ್ಷ ಮಂಜೂರಾಗಿದೆ ಎಂದು ಗ್ರಾ.ಪಂ.ಸದಸ್ಯ ಭಾವಾನಿಶಂಕರ್ ಬೈರೇಗೌಡ ತಿಳಿಸಿದರು.

ತಾಲ್ಲೂಕಿನ ಹಂಚೀಪುರದ ರಸ್ತೆ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿದ್ಧಾರೂಢ ಮಠದ ಉಮಾಭಾರತಿ ಅವರು ಶ್ರೀಮಠಕ್ಕೆ ರಸ್ತೆ ಕಾಮಗಾರಿ ಕೈಗೊಳ್ಳಲು ಕೇಳಿಕೊಂಡರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ನಾಗರಾಜು, ಗ್ರಾ.ಪಂ.ಸದಸ್ಯರಾದ ಕಾವೇರಮ್ಮ, ಜಯಮ್ಮ,  ಮತ್ತಿತರರು ಉಪಸ್ಥಿತರಿದ್ದರು.

ಕಾಡ್ಗಿಚ್ಚು: (ನೆಲಮಂಗಲ ವರದಿ)  ಇಲ್ಲಿಗೆ ಸಮೀಪದ ಮಧುರೆ ಗ್ರಾಮದ ಜುಮ್ಮಸಂದ್ರದ ಬಳಿಯ ನೀಲಗಿರಿ ತೋಪಿಗೆ ಆಕಸ್ಮಿಕ ಬೆಂಕಿ ಬಿದ್ದು 75ರಿಂದ 100ಎಕರೆ ನೀಲಗಿರಿ ಮರಗಳು ಬೆಂಕಿಯ ಶಾಖದಿಂದ ನಲುಗಿವೆ. ರೈತರ ಗೋಳನ್ನು ಕೇಳುವವರಿಲ್ಲದಂತಾಗಿದೆ ಎಂದು ವಿ.ಚಂದ್ರಶೇಖರ್ ದೂರಿದ್ದಾರೆ.

ಪ್ರದರ್ಶನ ಮಾರಾಟ
ನೆಲಮಂಗಲ: ಮಹಿಳೆಯರ ಆರ್ಥಿಕ ಸದೃಢತೆಗೆ ಸ್ವಯಂ ಉದ್ಯೋಗಗಳು ಪೂರಕವಾಗುತ್ತವೆ ಎಂದು ತಾ.ಪಂ.ಅಧ್ಯಕ್ಷ ಲಕ್ಷ್ಮೀನಾರಾಯಣ್ ತಿಳಿಸಿದರು.ಸ್ಥಳೀಯ ಗುರುಭವನದಲ್ಲಿ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಸಿಡಿಪಿಒ ನಳಿನಾ ಕಾಗಿನೆಲೆ ಮಾತನಾಡಿ ಸ್ತ್ರೀಶಕ್ತಿ ಭವನ ನಿರ್ಮಿಸಲು ಕೇಳಿಕೊಂಡರು. ಕಾರ್ಯನಿರ್ವಹಣಾಧಿಕಾರಿ ಡಾ.ಅಶ್ವತ್ಥಪ್ಪ ಅಧ್ಯಕ್ಷತೆ ವಹಿಸಿದ್ದರು. ಮೂರು ದಿನ ನಡೆಯುವ ಮೇಳದಲ್ಲಿ ಮಹಿಳೆಯರು ತಯಾರಿಸಿದ ಹಪ್ಪಳ, ಉಪ್ಪಿನಕಾಯಿ, ಕರಕುಶಲ ವಸ್ತುಗಳು, ಸಿದ್ದ ಉಡುಪುಗಳ ಪ್ರದರ್ಶನ ಮತ್ತು ಮಾರಟ ಮಾಡಲಾಗುತ್ತದೆ ಎಂದು ಮೇಲ್ಚಿಚಾರಕಿ ಡಾ.ತೇಜಸ್ವಿನಿ ತಿಳಿಸಿದರು. ಸ್ತ್ರೀಶಕ್ತಿ ಗುಂಪು ಮತ್ತು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.