ADVERTISEMENT

ಆಟೊಚಾಲಕನ ಮಕ್ಕಳಿಂದ ಅನಿಲ ಸೋರಿಕೆ ತಡೆ ಸಾಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:38 IST
Last Updated 14 ಡಿಸೆಂಬರ್ 2017, 19:38 IST
ಶ್ರಾವಣಿ ಮತ್ತು ಪುರುಷೋತ್ತಮ ಅನಿಲ ಸೋರಿಕೆ ಸಾಧನವನ್ನು ಪರಿಚಯಿಸಿದರು
ಶ್ರಾವಣಿ ಮತ್ತು ಪುರುಷೋತ್ತಮ ಅನಿಲ ಸೋರಿಕೆ ಸಾಧನವನ್ನು ಪರಿಚಯಿಸಿದರು   

ಬೆಂಗಳೂರು: ಅನಿಲ ಸೋರಿಕೆಯಿಂದ ಅವಘಡ ಸಂಭವಿಸುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಪರಿಹಾರವಾಗಿ ಆಟೊ ಚಾಲಕರೊಬ್ಬರ ಮಕ್ಕಳು ಸೋರಿಕೆ ತಡೆಯುವ ರೋಬೊಟಿಕ್‌ ಸಾಧನವನ್ನು ರೂಪಿಸಿದ್ದಾರೆ.

ದಯಾನಂದ ಸಾಗರ್‌ ವಿಶ್ವವಿದ್ಯಾಲಯ ನಗರದಲ್ಲಿ ಗುರುವಾರ ನಡೆಸಿದ ಪ್ರತೀಭಾ ಅನ್ವೇಷಣೆ–2017ರ ಕಾರ್ಯಕ್ರಮದಲ್ಲಿ ಈ ಸಾಧನ ಪ್ರಥಮ ಬಹುಮಾನ ಪಡೆಯಿತು.

ಗ್ಯಾಸ್‌ ಸೋರಿಕೆಯನ್ನು ಗ್ರಹಿಸುವ ಈ ಸೆನ್ಸರ್‌ ಸಿಲಿಂಡರ್‌ ಸ್ವಿಚ್ ಆಫ್‌ ಮಾಡಿ ಸೋರಿಕೆಯನ್ನು ತಡೆಯುತ್ತದೆ. ಈ ರೋಬೊಟಿಕ್‌ ಸೆನ್ಸರ್‌ಗೆ ‘ಸುರಕ್ಷಾ ಮಾ’ ಎಂದು ಹೆಸರಿಟ್ಟಿದ್ದಾರೆ.

ADVERTISEMENT

ಆಟೊ ಚಾಲಕರೊಬ್ಬರ ಪುತ್ರಿ ಶ್ರಾವಣಿ ಹಾಗೂ ಆಕೆಯ ತಮ್ಮ ಪುರುಷೋತ್ತಮ ಸೇರಿ ಈ ಸಾಧನವನ್ನು ರೂಪಿಸಿದ್ದಾರೆ. ಶ್ರಾವಣಿ ದಯಾನಂದ ಸಾಗರ್‌ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆಯ ತಮ್ಮ ಉತ್ತರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾನೆ.

‘ಮುಖ್ಯಮಂತ್ರಿ ಅವರು ಸರ್ಕಾರಿ ಶಾಲೆಗಳನ್ನು ಉಳಿಸಿ, ಅಭಿವೃದ್ಧಿ ಪಡಿಸಲು ಹೆಚ್ಚು ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ. ನಮ್ಮಂತಹ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿದ್ದಾರೆ. ಅವರ ಪ್ರತಿಭೆ ಗುರುತಿಸುವ ಕೆಲಸ ಆಗಬೇಕು’ ಎಂದು ಶ್ರಾವಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ದಯಾನಂದ ಸಾಗರ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಆರ್‌. ಜನಾರ್ದನ್‌, ‘ಇಂದಿನ ಅನ್ವೇಷಣೆಗಳು ಭವಿಷ್ಯದ ಆಸ್ತಿಗಳು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. 9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು’ ಎಂದು ವಿವರಿಸಿದರು.

ವಿಶ್ವವಿದ್ಯಾಲಯ ವೆಬ್‌ಸೈಟ್‌ ಹ್ಯಾಕ್‌: ಅಂತರ್ಜಾಲ ಭದ್ರತೆ ಬಲಪಡಿಸುವ ಪ್ರಾತ್ಯಕ್ಷಿಕೆ ತೋರಿಸಲು ಆರ್ಮಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ದಯಾನಂದ ಸಾಗರ್ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌ ಮಾಡಿ ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.