ಬೆಂಗಳೂರು: ಮಾಗಡಿ ರಸ್ತೆಯ ಮಾಚೋಹಳ್ಳಿಯಲ್ಲಿರುವ ಆಭರಣ ಮಳಿಗೆಯೊಂದಕ್ಕೆ ಸೋಮವಾರ ರಾತ್ರಿ ನುಗ್ಗಿದ್ದ ದುಷ್ಕರ್ಮಿಗಳು, ಮಳಿಗೆಯ ಮಾಲೀಕ ಚಂದೂರಾಮ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ.
ತೀವ್ರ ಗಾಯಗೊಂಡಿರುವ ಚಂದೂರಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
‘ರಾತ್ರಿ 9 ಗಂಟೆ ಸುಮಾರಿಗೆ ಜಾನ್ರಾಮ್ ಹಾಗೂ ಇಬ್ಬರು ಸಿಬ್ಬಂದಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಅದೇ ವೇಳೆ ಮಳಿಗೆಗೆ ನುಗ್ಗಿದ್ದ ನಾಲ್ವರು ದುಷ್ಕರ್ಮಿಗಳು, ಮಚ್ಚು ತೋರಿಸಿ ಬೆದರಿಸಿದ್ದರು. ಅದನ್ನು ಸಿಬ್ಬಂದಿ ಪ್ರಶ್ನಿಸಿದ್ದರು. ಆಗ ದುಷ್ಕರ್ಮಿಯೊಬ್ಬ, ಚಂದೂರಾಮ್ ಅವರ ಕೈಗೆ ಮಚ್ಚಿನಿಂದ ಹೊಡೆದಿದ್ದ. ನಂತರ ಚಿನ್ನಾಭರಣಗಳನ್ನು ಬ್ಯಾಗ್ಗಳಲ್ಲಿ ತುಂಬಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಸಿಬ್ಬಂದಿಯೊಬ್ಬ ಕೂಗಿಕೊಂಡಾಗ ಸ್ಥಳೀಯರು ಸಹಾಯಕ್ಕೆ ಬಂದಿದ್ದರು. ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿ ಓಡಲಾರಂಭಿಸಿದ್ದರು. ಅವರನ್ನು ಬೆನ್ನಟ್ಟಿದ್ದ ಸ್ಥಳೀಯರು, ಮಧು ಎಂಬಾತನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಆತನನ್ನು ಬಂಧಿಸಿ ಉಳಿದವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.
‘ಆರೋಪಿಗಳು ಹೆಲ್ಮೆಟ್ ಧರಿಸಿದ್ದರು. ಮುಖ ಗುರುತಿಸಲು ಸಾಧ್ಯವಾಗಲಿಲ್ಲ’ ಎಂದು ಚಂದೂರಾಮ್ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.