ADVERTISEMENT

ಆಸ್ಪತ್ರೆಯಲ್ಲಿ ಹಸುಳೆ ಬಿಟ್ಟು ತಾಯಿ ಪರಾರಿ

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST

ಚನ್ನಪಟ್ಟಣ: ಪಟ್ಟಣದ ಮಾತಾ ಆಸ್ಪತ್ರೆಗೆ ಶನಿವಾರ ಬೆಳಿಗ್ಗೆ ಆರೋಗ್ಯ ತಪಾಸಣೆಗೆ ಬಂದಿದ್ದ ಮಹಿಳೆಯೊಬ್ಬರು, ತನ್ನ ಎರಡು ವಾರದ ಗಂಡು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
 ಈ ವಿಷಯ ಆಸ್ಪತ್ರೆಯವರ ಗಮನಕ್ಕೆ ಬಂದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಪುಟ್ಟಸ್ವಾಮಿ ಹಾಗೂ ಎಸಿಡಿಪಿಒ ಪಾರ್ವತಮ್ಮ ಅವರು, ಮಗುವಿನ ಬಗ್ಗೆ ವಿವರಣೆ ಪಡೆದು, ಮಕ್ಕಳ ಕಲ್ಯಾಣ ಸಮಿತಿಯ ಶಿವಲಿಂಗಯ್ಯ ಅವರಿಗೆ ಒಪ್ಪಿಸಿದ್ದಾರೆ. ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷೆಗೊಳಪಡಿಸಿ ನಂತರ ಪೊಲೀಸರ ಸಹಾಯದೊಂದಿಗೆ ಸೋಲೂರಿನ ಶಿಶು ಕೇಂದ್ರಕ್ಕೆ ಮಗುವನ್ನು ನೀಡಲಾಗುವುದು. ಇಲ್ಲಿ ಮಗುವನ್ನು 60 ದಿನ ಕಾಲ ರಕ್ಷಿಸಲಾಗುವುದು.
 
ಈ ಅವಧಿ ಮಗುವಿನ ವಾರಸುದಾರರು ದೊರೆತರೆ ಅವರಿಗೆ ಮಗುವನ್ನು ಒಪ್ಪಿಸಲಾಗುವುದು. ವಾರಸುದಾರರು ಬಾರದಿದ್ದರೆ  ಶಿಶುಮಂದಿರದಲ್ಲಿ ಆರೈಕೆ ಮಾಡಲಾಗುವುದು ಎಂದು ಶಿವಲಿಂಗಯ್ಯ ತಿಳಿಸಿದರು.

ಮರಳು ಅಕ್ರಮ ಸಾಗಣೆ: 7 ಲಾರಿ ವಶ
ಮಾಗಡಿ:
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 7 ಲಾರಿಗಳನ್ನು ಪಟ್ಟಣದ ಪೊಲೀಸರ ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತಹಸೀಲ್ದಾರ್ ನಿರಂಜನ ಬಾಬು, ರಾಷ್ಟ್ರೀಯ ಹೆದ್ದಾರಿ 48ರ ಸೋಲೂರು ಉಪಠಾಣೆ ಬಳಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ಹಾಸನ, ಸಕಲೇಶಪುರ ಮತ್ತು ತಾಲ್ಲೂಕಿನ ವಿವಿಧ ಕೆರೆಗಳು ಮತ್ತು ಹಳ್ಳಗಳಿಂದ ಅಕ್ರಮವಾಗಿ ಮರಳು ತೆಗೆದು ಸಾಗಿಸಲಾಗುತ್ತಿದೆ.

ಕೆಲವರು ಪೊಲೀಸರ ಕಣ್ಣು ತಪ್ಪಿಸಿ, ತಾಳೇಕೆರೆ ,ಹೊಸಪಾಳ್ಯ ಮಾರ್ಗವಾಗಿ ಮಾಗಡಿ ಮೂಲಕ ಬೆಂಗಳೂರಿಗೆ ಮರಳು ಸಾಗಿಸುತ್ತಿದ್ದಾರೆ. ಕಳೆದ 7ತಿಂಗಳಿಂದ ಅಕ್ರಮ ಮರಳು ಸಾಗಿಸುತ್ತಿದ್ದ 173 ಲಾರ‌್ನಿ ವಶಪಡಿಸಿಕೊಳ್ಳಲಾಗಿದೆ.

ರೂ 19.07ಲಕ್ಷ ದಂಡ ವಸೂಲು ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ದಂಡಕ್ಕೂ ಬಗ್ಗದೆ ಅಕ್ರಮವಾಗಿ ಮರಳು ಸಾಗಾಣಿಕೆಯಲ್ಲಿ ತೊಡಗಿರುವವರ ವಿರುದ್ಧ  ಗಣಿ ಕಾಯ್ದೆ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುತ್ತಿದೆ ಎಂದು ತಹಸೀಲ್ದಾರರು ವಿವರಿಸಿದರು.

ವೃತ್ತ ನಿರೀಕ್ಷಕ ಎಚ್.ರವಿ, ಸಬ್ ಇನ್‌ಸ್ಪೆಕ್ಟರ್ ಆರ್.ರವಿ ಪ್ರಕಾಶ್, ಪೊಲೀಸ್ ಸಿಬ್ಬಂದಿ ಲಿಂಗರಾಜು, ಗೃಹದಳದ ಮಂಜುನಾಥ್ ಮತ್ತು ನಾರಾಯಣ ಅಕ್ರಮ ಮರಳು  ಲಾರಿಗಳನ್ನು ಹಿಡಿಯುವಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.