ಬೆಂಗಳೂರು: ‘ನಮ್ಮ ಪೂರ್ವಿಕರು ಊಟವನ್ನು ಹಾಳುಮಾಡುತ್ತಿರಲಿಲ್ಲ. ಉಳಿದ ಆಹಾರ ಪದಾರ್ಥಗಳನ್ನು ಸಾಕು ಪ್ರಾಣಿಗಳಿಗೆ ಹಾಕುತ್ತಿದ್ದರು. ಇಲ್ಲವೇ ಗೊಬ್ಬರ ಮಾಡುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ ಆಹಾರ ತ್ಯಾಜ್ಯ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮುಖ್ಯ ಸಂಶೋಧನಾ ವಿಜ್ಞಾನಿ ಡಾ. ಚಾಣಕ್ಯ ಹೇಳಿದರು.
ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ನಲ್ಲಿ ಸೋಮವಾರ ನಡೆದ ‘ವೇಸ್ಟ್ ಟು ಎನರ್ಜಿ ಟೆಕ್ನಾಲಜಿ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಕೊಳ್ಳುವಿಕೆ ಹೆಚ್ಚಾದಂತೆ ತ್ಯಾಜ್ಯ ಕೂಡ ಹೆಚ್ಚಾಗುತ್ತದೆ. ದ್ರವರೂಪದ ತ್ಯಾಜ್ಯವಾದರೆ ಅದು ಜಲಮಂಡಳಿ ಅವರದ್ದು, ಘನ ರೂಪದ್ದಾಗಿದ್ದರೆ ಬಿಬಿಎಂಪಿಗೆ ಸೇರಿದ್ದು ಎಂದು ಜವಾಬ್ದಾರಿಯಿಂದ ವಿಮುಕ್ತರಾಗುತ್ತಿದ್ದೇವೆ. ನಮ್ಮ ಮನೆಯ ತ್ಯಾಜ್ಯವನ್ನು ನಾವೇ ನಿರ್ವಹಿಸುವುದನ್ನು ಕಲಿತುಕೊಳ್ಳಬೇಕು. ತ್ಯಾಜ್ಯದಲ್ಲಿ ಶೇ 90ರಷ್ಟು ಆಹಾರ ಪದಾರ್ಥಗಳಿಂದ ಸಂಗ್ರಹವಾಗುತ್ತಿದೆ’ ಎಂದರು.
‘ಮಾರುಕಟ್ಟೆ, ಹೋಟೆಲ್, ಗೃಹ ತ್ಯಾಜ್ಯಗಳ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ಸಮರ್ಪಕವಾಗಿ ನಿಭಾಯಿಸಲು ಯುವ ಎಂಜಿನಿಯರ್ಗಳು ಶ್ರಮಿಸಬೇಕು’ ಎಂದು ಆವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.