ADVERTISEMENT

ಇಂದಿನಿಂದ ವೈದ್ಯಕೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಇಂದಿನಿಂದ ವೈದ್ಯಕೀಯ ಸಮ್ಮೇಳನ
ಇಂದಿನಿಂದ ವೈದ್ಯಕೀಯ ಸಮ್ಮೇಳನ   

ಬೆಂಗಳೂರು: ‘ಮಕ್ಕಳ ತುರ್ತು ವೈದ್ಯಕೀಯ ಚಿಕಿತ್ಸೆ‘ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನ ‘ನಾಪೆಮ್‌– 2018’ವು ಏಪ್ರಿಲ್‌ 6ರಿಂದ 8ರವರೆಗೆ ಮತ್ತಿಕೆರೆಯಲ್ಲಿರುವ ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕಾಲೇಜಿನ ವ್ಯವಸ್ಥಾಪಕ ಅಧ್ಯಕ್ಷೆ ಡಾ.ಅರುಣಾ ಸಿ.ರಮೇಶ್‌ ಮಾಹಿತಿ ನೀಡಿದರು.‘ಗಾಯಗೊಂಡ ಹಿರಿಯರು ಹಾಗೂ ಮಕ್ಕಳಿಗೆ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆಯ ವಿಷಯದಲ್ಲಿ ಭಾರತ ತುಂಬಾ ಹಿಂದಿದೆ. ಆರೋಗ್ಯ ಸೇವೆ ಕ್ಷೇತ್ರದಲ್ಲಿರುವವರಿಗೆ ತರಬೇತಿ ನೀಡಿ ಮಕ್ಕಳಿಗೆ ಶೀಘ್ರದಲ್ಲಿ ಅಗತ್ಯ ಚಿಕಿತ್ಸೆ ತಲುಪುವಂತೆ ಮಾಡುವುದು ನಮ್ಮ ಉದ್ದೇಶ’ ಎಂದರು.

‘ಭಾರತದಲ್ಲಿ 14 ವರ್ಷದೊಳಗಿನವರು ಶೇ 28.2 ಇದ್ದಾರೆ. ಮಕ್ಕಳಿಗೆ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಯಾದರೆ ಮಕ್ಕಳ ತಜ್ಞರು ಔಷಧ ನೀಡುತ್ತಾರೆ. ಆದರೆ, ಅಪಘಾತ, ಅಪಸ್ಮಾರ, ಗೋಲಿ–ನಾಣ್ಯಗಳಂಥ ವಸ್ತುಗಳನ್ನು ನುಂಗಿದಾಗ ತುರ್ತು ಚಿಕಿತ್ಸೆ ನೀಡುವುದು ಹೇಗೆ ಎನ್ನುವ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ’.

ADVERTISEMENT

ಅಪೊಲೊ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ವೆಂಕಟೇಶ್‌ ಎ.ಎನ್‌., ‘ಅಪಘಾತ ಉಂಟಾದಾಗ ಕಡಿಮೆ ಸಮಯದಲ್ಲಿ ಮಗುವಿನ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸುವುದು ಹಾಗೂ ಚಿಕಿತ್ಸೆ ನೀಡಬೇಕಾಗುತ್ತದೆ. ಇದರಿಂದ ಮಗು ಬೇಗ ಹುಷಾರಾಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಲ್ಲ ಹಂತದ ಸಿಬ್ಬಂದಿಗೂ ಮಾಹಿತಿ ಇರಬೇಕು’ ಎಂದರು.

ಮೊದಲ ದಿನ ಆರೋಗ್ಯ ಸೇವೆ ಕ್ಷೇತ್ರದಲ್ಲಿರುವ ಸುಮಾರು 500 ಜನರಿಗೆ ‘ಮಕ್ಕಳಿಗೆ ತುರ್ತು ಚಿಕಿತ್ಸೆ’ ನೀಡುವುದು ಹೇಗೆ ಎನ್ನುವುದನ್ನು ಪ್ರಾತ್ಯಕ್ಷಿಕೆಗಳ ಮೂಲಕ ಹೇಳಿಕೊಡಲಾಗುವುದು. ಏಪ್ರಿಲ್‌ 7 ಹಾಗೂ 8ರಂದು ಅಮೆರಿಕ, ಇಂಗ್ಲೆಂಡ್‌, ಬಾಂಗ್ಲಾದೇಶ, ಶ್ರೀಲಂಕಾ, ದುಬೈ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಿಂದ 14 ಮಂದಿ ತಜ್ಞರು ಮಕ್ಕಳ ತುರ್ತು ಚಿಕಿತ್ಸೆಯಲ್ಲಾದ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಳ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.