ADVERTISEMENT

ಉತ್ತರದಲ್ಲಿ ಬೈಕ್‌ ರ್‍ಯಾಲಿ, ದಕ್ಷಿಣದಲ್ಲಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:40 IST
Last Updated 3 ಏಪ್ರಿಲ್ 2014, 19:40 IST
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ನಡೆಸಿದ ಬೈಕ್‌ ರ್‌್ಯಾಲಿಯನ್ನು ಕ್ಷೇತ್ರದ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಉದ್ಘಾಟಿಸಿದರು. ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಹಾಜರಿದ್ದರು 	–ಪ್ರಜಾವಾಣಿ ಚಿತ್ರ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ನಡೆಸಿದ ಬೈಕ್‌ ರ್‌್ಯಾಲಿಯನ್ನು ಕ್ಷೇತ್ರದ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಉದ್ಘಾಟಿಸಿದರು. ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಮೂರೂ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಗುರುವಾರ ಪಕ್ಷದ ಕಾರ್ಯಕರ್ತರು ಬೈಕ್‌ ರ್‌್ಯಾಲಿ, ಪಾದಯಾತ್ರೆ ಮೂಲಕ ಮತ ಯಾಚಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಅವರ ಪರವಾಗಿ ಪಕ್ಷದ ಕಾರ್ಯಕರ್ತರು ಬೈಕ್‌ ರ್‌್ಯಾಲಿ ನಡೆಸಿದರು. ಯಶವಂತಪುರ, ಮತ್ತಿಕೆರೆ, ಅರಮನೆನಗರ, ದಿವಾನರ ಪಾಳ್ಯ, ಬಿಇಎಲ್‌ ರಸ್ತೆ, ನೇತಾಜಿನಗರ ಮತ್ತು ಮಲ್ಲೇಶ್ವರ ಭಾಗಗಳಲ್ಲಿ ಈ ರ್‌್ಯಾಲಿ ನಡೆಯಿತು.

ಸದಾನಂದಗೌಡ, ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ರ್‌್ಯಾಲಿಗೆ ಚಾಲನೆ ನೀಡಿದರು. ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟರು. ‘ದೇಶದ ಭದ್ರತೆ ಮತ್ತು ಸಾರ್ವಭೌಮತ್ವ ಕಾಪಾಡಲು ಬಿಜೆಪಿ ಬೆಂಬಲಿಸಬೇಕು’ ಎಂದು ಸದಾನಂದಗೌಡ ಮನವಿ ಮಾಡಿದರು. ‘ಕಾಂಗ್ರೆಸ್‌ನಂತೆ ಜಾತಿ ರಾಜಕಾರಣ ಮಾಡದ ಬಿಜೆಪಿ, ಅಲ್ಪಸಂಖ್ಯಾತರ ಅಭಿವೃದ್ಧಿಗೂ ಬದ್ಧವಾಗಿದೆ’ ಎಂದು ಹೇಳಿದರು.
ಸಂಜೆ ಸುಬ್ರಹ್ಮಣ್ಯನಗರದಲ್ಲಿ ಅಶ್ವತ್ಥನಾರಾಯಣ ಪಾದಯಾತ್ರೆ ನಡೆಸುವ ಮೂಲಕ ಬೆಂಬಲ ಯಾಚಿಸಿದರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಮುನಿರಾಜು ನೇತೃತ್ವದಲ್ಲಿ ಮನೆ–ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು. ರಾತ್ರಿ ಬಲಿಜ ಸಮಾಜದ ಪ್ರಮುಖರ ಸಭೆಯನ್ನು ನಡೆಸಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು. ವಿಧಾನ ಪರಿಷತ್‌ ಸದಸ್ಯೆ ತಾರಾ ಅನೂರಾಧಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತಕುಮಾರ್‌ ಪರವಾಗಿ ಅವರ ಪತ್ನಿ ತೇಜಸ್ವಿನಿ ರಾಗಿಗುಡ್ಡ ಮತ್ತು ಜಯನಗರ ಪೂರ್ವ ಭಾಗದಲ್ಲಿ ಪಾದಯಾತ್ರೆ ನಡೆಸಿದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಪಾಲ್ಗೊ­ಳ್ಳಲು ತೆರಳಿದ್ದರಿಂದ ಗುರುವಾರ ಅನಂತಕುಮಾರ್ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿಲ್ಲ.

ಪದ್ಮನಾಭನಗರದಲ್ಲಿ ಬುಧವಾರ ರಾತ್ರಿ ಪಾದಯಾತ್ರೆ ನಡೆಸಿದ ಅನಂತಕುಮಾರ್‌, ಮಾಸ್ಟರ್‌ ಹಿರಣ್ಣಯ್ಯ, ಟಿ.ಎನ್‌. ಸೀತಾರಾಂ, ದೇವರಾಜ್‌ ಸೇರಿದಂತೆ ಕಲಾವಿದರು ಮತ್ತು ಸಾಹಿತಿಗಳ ಮನೆಗಳಿಗೂ ತೆರಳಿ ಬೆಂಬಲ ಯಾಚಿಸಿದರು. ಹೋಟೆಲ್‌ ಉದ್ಯಮಿಗಳ ಸಭೆಯನ್ನೂ ನಡೆಸಿದರು.

ಬಿಜೆಪಿಗೆ ಸೇರ್ಪಡೆ: ಬೆಂಗಳೂರು ನಗರ ಜಿಲ್ಲಾ ಜೆಡಿಎಸ್‌ ಘಟಕದ ಅಧ್ಯಕ್ಷ ಅಂದಾನಪ್ಪ, ಕಾಂಗ್ರೆಸ್‌ ಮುಖಂಡ ಕೆ.ಸಿ. ಶ್ರೀನಿವಾಸ್‌ ಮತ್ತಿತರರು ತಮ್ಮ ಬೆಂಬಲಿಗರೊಂದಿಗೆ ಗುರುವಾರ ಬಿಜೆಪಿಗೆ ಸೇರ್ಪಡೆಯಾದರು. ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು ಪಕ್ಷಕ್ಕೆ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.