ADVERTISEMENT

ಉನ್ನತ ಶಿಕ್ಷಣದಲ್ಲಿ ಕನ್ನಡ ಪರೀಕ್ಷೆ ಕಡ್ಡಾಯಗೊಳಿಸಿ

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 20:14 IST
Last Updated 4 ಜುಲೈ 2017, 20:14 IST
ನಿವೃತ್ತ ಪ್ರಾಧ್ಯಾಪಕರಾದ ಯು.ಜಿ. ತಿಮ್ಮಯ್ಯ, ಕೆ.ರಮಾನಂದ, ಚಂದ್ರಶೇಖರ ನಂಗಲಿ, ಭಕ್ತರಹಳ್ಳಿ ಕಾಮರಾಜು ಹಾಗೂ  ಸತ್ಯವತಿ ಅವರನ್ನು ಸನ್ಮಾನಿಸಲಾಯಿತು (ಎಡದಿಂದ ಕುಳಿತವರು). ಒಕ್ಕೂಟದ ಕಾರ್ಯದರ್ಶಿ ಪದ್ಮಿನಿ ನಾಗರಾಜ್, ಅಧ್ಯಕ್ಷ ಡಾ. ಬೆಳಕೆರೆ ಲಿಂಗರಾಜು, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಎಂ. ಶಂಕರ ರೆಡ್ಡಿ, ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಎಂ. ಮುನಿರಾಜು,  ಮನು ಬಳಿಗಾರ್‌, ಭೈರಮಂಗಲ ರಾಮೇಗೌಡ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಎಂ.ಸುಮಿತ್ರಾ (ಎಡದಿಂದ ನಿಂತವರು) ಇದ್ದರು –ಪ್ರಜಾವಾಣಿ ಚಿತ್ರ
ನಿವೃತ್ತ ಪ್ರಾಧ್ಯಾಪಕರಾದ ಯು.ಜಿ. ತಿಮ್ಮಯ್ಯ, ಕೆ.ರಮಾನಂದ, ಚಂದ್ರಶೇಖರ ನಂಗಲಿ, ಭಕ್ತರಹಳ್ಳಿ ಕಾಮರಾಜು ಹಾಗೂ ಸತ್ಯವತಿ ಅವರನ್ನು ಸನ್ಮಾನಿಸಲಾಯಿತು (ಎಡದಿಂದ ಕುಳಿತವರು). ಒಕ್ಕೂಟದ ಕಾರ್ಯದರ್ಶಿ ಪದ್ಮಿನಿ ನಾಗರಾಜ್, ಅಧ್ಯಕ್ಷ ಡಾ. ಬೆಳಕೆರೆ ಲಿಂಗರಾಜು, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಎಂ. ಶಂಕರ ರೆಡ್ಡಿ, ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಎಂ. ಮುನಿರಾಜು, ಮನು ಬಳಿಗಾರ್‌, ಭೈರಮಂಗಲ ರಾಮೇಗೌಡ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಎಂ.ಸುಮಿತ್ರಾ (ಎಡದಿಂದ ನಿಂತವರು) ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಉನ್ನತ ಶಿಕ್ಷಣದಲ್ಲಿ ಎಲ್ಲಾ ವಿಭಾಗಗಳಲ್ಲೂ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಸಬೇಕು ಮತ್ತು  ಅದಕ್ಕೆ ಪರೀಕ್ಷೆಗಳನ್ನು ನಡೆಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಒತ್ತಾಯಿಸಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ ಮಂಗಳವಾರ ಆಯೋಜಿಸಿದ್ದ ‘ಕನ್ನಡ ಅಧ್ಯಯನ ಪತ್ರಿಕೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎರಡನೇ ವರ್ಷದ ಪದವಿಗೆ ಭಾಷಾ ಕಲಿಕೆ ಮುಗಿಯುತ್ತದೆ. ಅದರಿಂದ ವಿಜ್ಞಾನ, ವಾಣಿಜ್ಯ ವಿಷಯಗಳನ್ನು ಓದುವ ಬಹಳಷ್ಟು ವಿದ್ಯಾರ್ಥಿಗಳು ಕನ್ನಡವನ್ನು ಮರೆತೇ ಬಿಡುತ್ತಾರೆ. ಕನ್ನಡ ಭಾಷೆ ಉಳಿಯಬೇಕೆಂದರೆ, ಸ್ನಾತಕೋತ್ತರ ಪದವಿಯಲ್ಲಿ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯ
ನ್ನಾಗಿ ಕಲಿಸಿ, 50 ಅಂಕಗಳಿಗೆ ಪರೀಕ್ಷೆಯನ್ನು ನಡೆಸಬೇಕು’ ಎಂದು ಹೇಳಿದರು.

ADVERTISEMENT

‘ಖಾಸಗಿ ಶಾಲಾ– ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಇದು ಕನ್ನಡಕ್ಕೆ ಮಾಡುವ ಅವಮಾನ. ಕನ್ನಡ ಉಳಿಸುವಲ್ಲಿ  ಅಧ್ಯಾಪಕರ ಪಾತ್ರ ಅನನ್ಯವಾದದ್ದು.  ಮುಂದಿನ ರಾಜ್ಯ ಬಜೆಟ್‌ನಲ್ಲಿ ಕನ್ನಡ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ನೀಡಬೇಕು.
ಅದರಿಂದ ಕನ್ನಡ ಉಳಿವಿಗಾಗಿ ನಡೆಸುತ್ತಿರುವ ಹೋರಾಟಗಳಿಗೆ ಬಲ ಬರುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಮೈಸೂರಿನಲ್ಲಿ ನಡೆಯಲ್ಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆಯ ಸ್ಥಾನ-ಮಾನ ಕುರಿತು ಚರ್ಚೆ ನಡೆಸಲು ಬೆಂಗಳೂರು ವಿವಿ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ ನಿರ್ಧರಿಸಿದೆ. ಇದಕ್ಕೆ ಸಹಯೋಗ ನೀಡಲು ಸಿದ್ಧರಿದ್ದೇವೆ’  ಎಂದು ಹೇಳಿದರು.

ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ‘ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಪಿಎಚ್‌.ಡಿ ಸಂಶೋಧನೆ ಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಇದ್ದರಿಂದ ಸಮಾಜಕ್ಕೆ ಹಲವು ವಿಷಯಗಳ ಬಗ್ಗೆ ಮಾಹಿತಿ ದೊರೆಯಲಿದೆ. ಹಿರಿಯರು, ಸಾಹಿತಿಗಳು ಇದನ್ನು ಪ್ರೋತ್ಸಾಹಿಸಿಬೇಕು’ ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕರಿಗೆ ಹಾಗೂ ಪಿಎಚ್.ಡಿ ಪದವಿ ಪಡೆದವರಿಗೆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.