ADVERTISEMENT

ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕೌಶಲ ವೃದ್ಧಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 20:00 IST
Last Updated 20 ಸೆಪ್ಟೆಂಬರ್ 2013, 20:00 IST

ಬೆಂಗಳೂರು: ದಕ್ಷಿಣ ಭಾರತದಲ್ಲಿನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕೌಶಲ ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಸಂಯೋಜನಾ ಮಂಡಳಿಯ ವಲಯ ಕೇಂದ್ರವನ್ನು ಪ್ರಥಮ ಬಾರಿಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾ ಲಯದ ಆವರಣದಲ್ಲಿ ಪ್ರಾರಂಭಿಸ ಲಾಗುತ್ತಿದೆ ಎಂದು ಸಂಯೋಜನಾ ಮಂಡಳಿಯ ಸದಸ್ಯ ಕಾರ್ಯದರ್ಶಿ ಡಾ.ಪಾಲಿವಾಲ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರದಿಂದ ಕಾರ್ಯ ಪ್ರಾರಂಭಿಸಲಿರುವ ಕೇಂದ್ರ ವನ್ನು ಸಚಿವ ಎಂ.ಪಲ್ಲಮ್‌ ರಾಜು ಅವರು ಉದ್ಘಾಟಿಸಲಿದ್ದಾರೆ ಎಂದರು.

ಈ ವಲಯ ಕೇಂದ್ರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಂಧ್ರಪ್ರದೇಶವನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ  ಕಾರ್ಯ ನಿರ್ವಹಿಸಲಿದ್ದು, ಎಂಜಿನಿ ಯರಿಂಗ್‌, ಫಾರ್ಮಸಿ, ಮ್ಯಾನೇಜ್‌ ಮೆಂಟ್‌ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಮೌಲ್ಯ ಮಾಪನ ನಡೆಸಲಿದೆ ಎಂದು ತಿಳಿಸಿದರು.

ಇತ್ತೀಚೆಗೆ ವ್ಯಾಸಂಗ ಮುಗಿಸಿ ಹೊರ ಬರುತ್ತಿರುವ ವಿದ್ಯಾರ್ಥಿಗಳ ಗುಣಮಟ್ಟ ತುಂಬಾ ಕಳಪೆ ಮಟ್ಟದ್ದಾಗಿದೆ. ದೆಹಲಿಯಲ್ಲಿ ಕುಳಿತು ಇಲ್ಲಿನ ವಿದ್ಯಾರ್ಥಿ ಗಳ ಮೌಲ್ಯ ಮಾಪನ ಮಾಡಲು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ವಿದ್ಯಾರ್ಥಿಗಳ ಕೌಶಲವನ್ನು ಹೆಚ್ಚಿಸಿ, ಹೆಚ್ಚಿನ ಉದ್ಯೋಗಗಳು ಲಭ್ಯ ವಾಗುವಂತೆ ತಯಾರು ಮಾಡುವುದು  ಈ ವಲಯದ ಉದ್ದೇಶ ಎಂದರು. 

ಎಂಜಿನಿಯರಿಂಗ್‌ ಮುಗಿಸಿದವರನ್ನು ವಿವಿಧ ಹಂತಗಳಲ್ಲಿ ಮೌಲ್ಯ ಮಾಪನ ಮಾಡುವುದು ಈ ಮಂಡಳಿಯ ಕರ್ತವ್ಯ. ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ,  ವಿಜ್ಞಾನವನ್ನು ಅವರು ಕಾರ್ಯ ಕ್ಷೇತ್ರದಲ್ಲಿ ಬಳಸಿಕೊಳ್ಳುವ ರೀತಿ ಸೇರಿದಂತೆ ಅವರ ಒಟ್ಟಾರೆ ಕೌಶಲದ ಬಗ್ಗೆ ಮಾಪನ ಮಾಡಲಾಗುತ್ತದೆ. ಈ ಹಿಂದೆ ಇದ್ದ ಮಾಪನ ಪದ್ಧತಿಯನ್ನು ಕಳೆದ ಏಪ್ರಿಲ್‌ನಿಂದ ಬದಲಾಯಿಸ ಲಾಗಿದ್ದು, ಈಗ ಹೊಸ ರೀತಿಯ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ವಲಯ ಮಂಡಳಿ ನಡೆಸುವ ಮೌಲ್ಯ ಮಾಪನ ಕಾಗದ ರಹಿತವಾಗಿದ್ದು, ಎಲ್ಲವನ್ನೂ ಇಂಟರ್‌ನೆಟ್‌ ಮೂಲಕ ನಡೆಸಲಾಗುತ್ತದೆ ಎಂದರು.  

ವಿಟಿಯು ಕುಲಪತಿ ಡಾ.ಮಹೇಶಪ್ಪ ಮಾತನಾಡಿ, ಎಂಜಿನಿಯರಿಂಗ್‌ ಮುಗಿಸಿ ದ ಪದವೀಧರರಿಗೆ 10 ಸಾವಿರ ಉದ್ಯೋಗ ಸೃಷ್ಟಿಸುವ ಸಲುವಾಗಿ ಒಂದು ವೆಬ್‌ಸೈಟ್‌ ಪ್ರಾರಂಭಿಸಲಾ ಗುವುದು. ಖಾಲಿ ಇರುವ ಉದ್ಯೋಗಗಳ ಮಾಹಿತಿ ನೀಡುವಂತೆ ಎಫ್‌ಕೆಸಿಸಿಐ ಕೋರಲಾಗಿದೆ ಎಂದರು.

ಇದೇ 28ಕ್ಕೆ ದಾವಣಗೆರೆಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸ ಲಾಗಿದ್ದು, ಮುಂದಿನ ದಿನಗಳಲ್ಲಿ ಗುಲ್ಬ ರ್ಗ ಹಾಗೂ ಬೆಳಗಾವಿಯಲ್ಲೂ ನಡೆಸ ಲಾಗುವುದು. ಜೊತೆಗೆ ವಿದ್ಯಾ ಲಯದಿಂದ ಹೊರ ಬರುವ ಪ್ರತಿಯೊಬ್ಬ ರಿಗೂ 30 ರಿಂದ 60 ದಿನಗಳವರೆಗೆ ಇಂಟರ್ನ್‌ಶಿಪ್‌ ಮಾಡುವ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.