ಬೆಂಗಳೂರು: ‘ಓದುವುದು ಬಿಟ್ಟರೆ, ಅಡುಗೆ ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದೆ. ಅಡುಗೆ ಮಾಡುವುದು ನನ್ನ ಪ್ಯಾಷನ್. ಹೊಸ ರೆಸಿಪಿಗಳ ಪ್ರಯೋಗ ಮಾಡುತ್ತಿರುತ್ತೇನೆ. ಒಂದರ್ಥದಲ್ಲಿ ತಿಂಡಿಪೋತ’ -ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸುದರ್ಶನ್ ತಮ್ಮ ಇಷ್ಟದ ವಿಷಯದ ಬಗ್ಗೆ ಹೇಳಿಕೊಂಡಿದ್ದು ಹೀಗೆ.
‘ಶಾಲೆಯಿಂದ ಬಂದ ಬಳಿಕ ಹೋಂ ವರ್ಕ್ ಮಾಡಲು ಇಲ್ಲದಿದರೆ ಟಿ.ವಿ ನೋಡುತ್ತಿದ್ದೆ. ಇಷ್ಟೇ ಹೊತ್ತು ಓದಬೇಕೆಂಬ ನಿಯಮಗಳನ್ನು ಹಾಕಿಕೊಂಡಿರಲಿಲ್ಲ. ಆದರೆ, ಅಂದಿನ ಪಾಠ ಮನನ ಮಾಡುವವರೆಗೂ ಏಳುತ್ತಿರಲಿಲ್ಲ. 600ಕ್ಕಿಂತ ಹೆಚ್ಚು ಅಂಕ ಬರುತ್ತದೆ ಎಂದು ಎಣಿಸಿದ್ದೆ. ಶೇ 100ರಷ್ಟು ಅಂಕ ಬಂದಿರುವುದು ಆಶ್ಚರ್ಯದ ಜೊತೆಗೆ ಆಘಾತವೂ ಆಗಿದೆ’ ಎಂದು ನಗುತ್ತಲೇ ಹೇಳಿದ.
ಕಾನ್ಸ್ಟೆಬಲ್ ಮಗನಿಗೆ 624 ಅಂಕ
ಕೆಜಿಎಫ್ ಉಪಕಾರಾಗೃಹದಲ್ಲಿ ಕಾನ್ಸ್ಟೆಬಲ್ ಆಗಿರುವ ಆನಂದ್ ಅವರ ಮಗ ಎಂ.ಎ.ಶ್ರೀನಿವಾಸ್ 624 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾನೆ.
‘ನಮ್ಮ ಗ್ರಾಮದಿಂದ ಶಾಲೆ 15 ಕಿ.ಮೀ. ದೂರವಿದೆ. ನೆಲಮಂಗಲದವರೆಗೂ ಬಸ್ನಲ್ಲಿ ಹೋಗಿ ಅಲ್ಲಿಂದ 2 ಕಿ.ಮೀ ನಡೆದು ಶಾಲೆಗೆ ಹೋಗುತ್ತಿದ್ದೆ. ಗಣಿತ ವಿಷಯ ಅಚ್ಚುಮೆಚ್ಚು. ದಿನ ಬೆಳಿಗ್ಗೆ 4 ರಿಂದ 6 ಹಾಗೂ ಸಂಜೆ 8 ರಿಂದ 10ರವರೆಗೆ ವ್ಯಾಸಂಗ ಮಾಡುತ್ತಿದ್ದೆ. ಡಾಕ್ಟರ್ ಆಗುವ ಹಂಬಲವಿದೆ’ ಎಂದು ಕನಸನ್ನು ಬಿಚ್ಚಿಟ್ಟನು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.