ಬೆಂಗಳೂರು: ಎಚ್ಐವಿ ಪೀಡಿತ ಮಕ್ಕಳಿಗೆ ನೆರವಾಗುವ ಸಲುವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಸಾಮಾಜಿಕ ಸಂವೇದನಾ ಕ್ಲಬ್ ‘ವಿಕಸನ’ ವತಿಯಿಂದ ಸಂಸ್ಥೆಯ ಪ್ರಾಂಗಣದಲ್ಲಿ ‘ದಾನ ಉತ್ಸವ’ ಆಚರಿಸಲಾಯಿತು.
ದೇಶದ ವಿವಿಧ ಭಾಗಗಳಿಂದ ಬಂದಿದ್ದವರಿಗೆ ಐಐಎಂಬಿ ದಿನಚರಿಯ ಪರಿಚಯ ಮಾಡಿಕೊಳ್ಳುವ ಅವಕಾಶವನ್ನು ಈ ಉತ್ಸವ ಒದಗಿಸಿತು. ಹೈಸ್ಕೂಲ್ ವಿದ್ಯಾರ್ಥಿಗಳಿಂದ ಹಿಡಿದು ವೃತ್ತಿಪರರವರೆಗೆ ಒಟ್ಟು 76 ಮಂದಿ ಸಂಸ್ಥೆಯ ಪ್ರಾಂಗಣದಲ್ಲಿ ಒಂದು ದಿನವನ್ನು ಕಳೆದರು. ಇವರಲ್ಲಿ 15ರಿಂದ 54 ವರ್ಷ ಪ್ರಾಯದವರು ಇದ್ದರು.
ಸಂಸ್ಥೆಯ ಬಗ್ಗೆ ತಿಳಿದುಕೊಳ್ಳುವ ಕಾತರದಿಂದ ಬಂದವರನ್ನು ಐಐಎಂಬಿ ನಿರ್ದೇಶಕ ಪ್ರೊ. ಜಿ.ರಘುರಾಮ್ ಬರಮಾಡಿಕೊಂಡರು. ಶೈಕ್ಷಣಿಕ ಕಾರ್ಯಕ್ರಮಗಳ ಡೀನ್ ಪ್ರೊ. ಸೌರವ್ ಮುಖರ್ಜಿ ಅವರು ‘ಸಾಂಘಿಕ ನಡವಳಿಕೆ’, ಪ್ರೊ. ವೈ.ಎಲ್.ಆರ್. ಮೂರ್ತಿ ಅವರು ‘ಮಾರ್ಕೆಟಿಂಗ್ ತಂತ್ರಗಳು’ ಹಾಗೂ ಆರ್ಬಿಐ ಅರ್ಥಶಾಸ್ತ್ರ ಪೀಠದ ಪ್ರಾಧ್ಯಾಪಕ ಪ್ರೊ. ರೂಪ ಚಂದ್ರ ಅವರು ಅರ್ಥಶಾಸ್ತ್ರದ ಪಾಠ ಮಾಡಿದರು.
ಪ್ರಾಂಗಣವನ್ನು ಸುತ್ತಾಡಿದ ಪ್ರೇಕ್ಷಕರು ‘3 ಈಡಿಯಟ್ಸ್’ ಸಿನಿಮಾ ಚಿತ್ರೀಕರಣ ನಡೆದ ಸ್ಥಳವನ್ನು ಕುತೂಹಲದಿಂದ ವೀಕ್ಷಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದ ಮೂಲಕ ಸಂಗ್ರಹವಾದ ಮೊತ್ತವನ್ನು ಎಚ್ಐವಿ ಪೀಡಿತ ಮಕ್ಕಳ ಶ್ರೇಯೋಭಿವೃದ್ಧಿಗೆ ಬಳಸುತ್ತೇವೆ ಎಂದು ಸಂಘಟಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.