ADVERTISEMENT

ಒತ್ತಡ ನಿವಾರಣೆಗೆ ಸಲಹೆ;ಸಂಚಾರ ಪೊಲೀಸರಿಗೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಬೆಂಗಳೂರು: `ಸಂಚಾರ ವಿಭಾಗದ ಪೊಲೀಸ್ ಸಿಬ್ಬಂದಿ ಯಾವಾಗಲೂ ಬಿಸಿಲು, ಮಾಲಿನ್ಯ, ಹೊಗೆ ಮತ್ತು ಮಳೆಯಲ್ಲಿ ಹಗಲಿರುಳು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ~ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ. ಸಲೀಂ ಅವರು ಹೇಳಿದರು.

ಮ್ಯಾಕ್ ಸಂಸ್ಥೆ ಮತ್ತು ಬೆಂಗಳೂರು ಸಾರಿಗೆ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದಲ್ಲಿ  ಸಂಚಾರ ಪೊಲೀಸರಿಗೆ ಆಯೋಜಿಸಿದ್ದ `ಒತ್ತಡ ನಿವಾರಣೆ~ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ಸಂಚಾರ ಪೊಲೀಸರ ಕೆಲಸವು ಮಾಲಿನ್ಯಯುಕ್ತವಾದ ವಾತಾವರಣದಲ್ಲಿ ಇರುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಆದ್ದರಿಂದ ಅವರು ತಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಈ ಕಾರ್ಯಾಗಾರವು ಅನುಕೂಲವಾಗಲಿದೆ~ ಎಂದರು.

`ಸಾರಿಗೆ ಇಲಾಖೆಯಿಂದ ಅನೇಕ ಶಿಬಿರಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಈಗ ಈ ಕಾರ್ಯಾಗಾರದಲ್ಲಿ ಅವರಿಗೆ ಒತ್ತಡ ಕಡಿಮೆ ಮಾಡಿಕೊಳ್ಳುವಂತಹ ಅನೇಕ ತಂತ್ರಗಳನ್ನು ಹೇಳಿಕೊಡಲಾಗುತ್ತದೆ. ಮನೆಗೆ ಹೋಗಿ ಇದನ್ನು ಅಭ್ಯಾಸ ಮಾಡಬೇಕು. ಇದರಿಂದ ಅವರ ಆರೋಗ್ಯ ಸುಧಾರಣೆಯಾಗುತ್ತದೆ~ ಎಂದು ಹೇಳಿದರು.

ಮ್ಯಾಕ್ ಸಂಸ್ಥೆಯ ಉಪಾಧ್ಯಕ್ಷ ಶಾಜಾನ್ ಸ್ಯಾಮ್ಯುಯೆಲ್ ಮಾತನಾಡಿ, `ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡಿದರೂ ಒಂದು ಧನ್ಯವಾದವನ್ನು ಹೇಳದ ಕೆಲಸವಿದು. ಇದರಲ್ಲಿ ತುಂಬ ಒತ್ತಡಗಳಿರುತ್ತವೆ. ಇಲ್ಲಿ ಮುಖ್ಯವಾಗಿ ಸಂಚಾರ ಪೊಲೀಸರಿಗಿಂತ ವಾಹನ ಸವಾರರದೇ ತಪ್ಪಿರುತ್ತದೆ.

ಆದರೆ, ಅವರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಪೊಲೀಸರು ತಮ್ಮ ತಾಳ್ಮೆ ಕಳೆದುಕೊಳ್ಳುತ್ತಾರೆ. ಅವರು ತಾಳ್ಮೆ ಕಳೆದುಕೊಳ್ಳದಂತೆ ಕೆಲವು ತಂತ್ರಗಳನ್ನು ಈ ಕಾರ್ಯಾಗಾರದಲ್ಲಿ ಹೇಳಿಕೊಡಲಾಗುತ್ತದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT