ADVERTISEMENT

ಕಡಿಮೆ ತೂಕದ ಹರಿಗೋಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಬೆಂಗಳೂರು: ಸಾಂಪ್ರದಾಯಿಕ ತೆಪ್ಪಕ್ಕೆ ಪರ್ಯಾಯವಾಗಿ ಕಡಿಮೆ ತೂಕದ ಹರಿಗೋಲನ್ನು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದ (ಎನ್‌ಎಎಲ್‌) ವೈಜ್ಞಾನಿಕ ಮತ್ತು ಕೈಗಾರಿಕಾ ಅಭಿವೃದ್ಧಿ ಪರಿಷತ್‌ (ಸಿಎಸ್‌ಐಆರ್‌) ಅಭಿವೃದ್ಧಿಪಡಿಸಿದೆ.

ಪ್ರವಾಹ ಸಂದರ್ಭದಲ್ಲಿ ರಕ್ಷಣೆಗೆ  ಸೂಕ್ತವಾಗುವಂತೆ ಹಾಗೂ ಮೀನುಗಾರ ಬಳಕೆಗೆ ಅನುಕೂಲವಾಗುವಂತೆ ಈ ಹರಿಗೋಲನ್ನು ರೂಪಿಸಲಾಗಿದೆ.
ಬಿದಿರು, ಫೈಬರ್‌, ಅಲ್ಯುಮಿನಿಯಂ ಬಳಸಿ ಹರಿಗೋಲು ನಿರ್ಮಿಸಲಾಗಿದೆ. ‘ಸ್ವರ್ಣಹಂಸ’ ಹೆಸರಿನ ಈ ಆಧುನಿಕ ಹರಿಗೋಲಿನ ಪ್ರಾಯೋಗಿಕ ಓಡಾಟ ಮಂಗಳವಾರ ನಗರದ ಹಲಸೂರು ಕೆರೆಯಲ್ಲಿ ನಡೆಯಿತು.

ಅಲ್ಯುಮಿನಿಯಂ ಅಸೋಸಿಯೇಷನ್‌ ಆಫ್‌ ಇಂಡಿಯಾದ ಸಹಭಾಗಿತ್ವದಲ್ಲಿ ಅಲ್ಯುಮಿನಿಯಂ ದೋಣಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಆದಿತ್ಯ ಬಿರ್ಲಾ ಸಮೂಹದ ಹಿಂಡಾಲ್ಕೊ ಕಂಪೆನಿಗಾಗಿ ಈ ಪ್ರಾಯೋಗಿಕ ಓಡಾಟ ಆಯೋಜಿಸಲಾಗಿತ್ತು.ಹರಿಗೋಲಿನ ವಿನ್ಯಾಸ ಆಕರ್ಷಕವಾಗಿದೆ. ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗೆ ಈ ವಿನ್ಯಾಸದ ಹರಿಗೋಲನ್ನು ಬಳಸಿಕೊಳ್ಳಬಹುದಾಗಿದೆ ಎಂದು ಕಂಪೆನಿಯ ಸಹಾಯಕ ಉಪಾಧ್ಯಕ್ಷ ವಿ.ರಾಮಸ್ವಾಮಿ ಹೇಳಿದರು.

ರಾಜ್ಯ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ಮತ್ತು ಮಲ್ಲಘಟ್ಟ ಕೆರೆಗಳಲ್ಲಿ 2012ರ ಜೂನ್‌ನಲ್ಲಿ ಈ ಹರಿಗೋಲಿನ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ಸಹಾಯಧನ ಯೋಜನೆಯಡಿ ಈ ವಿನ್ಯಾಸದ ಹರಿಗೋಲನ್ನು ಮೀನುಗಾರರಿಗೆ ವಿತರಿಸುವ ಚಿಂತನೆಯೂ ಇದೆ.

‘27 ಕೆ.ಜಿ ತೂಕದ 600 ಕೆ.ಜಿ ಭಾರ ಸಾಮರ್ಥ್ಯದ ಹರಿಗೋಲು ಇದಾಗಿದೆ. ಪ್ರತಿ ಹರಿಗೋಲು ನಿರ್ಮಾಣಕ್ಕೆ ₨ 5 ಸಾವಿರ ವೆಚ್ಚವಾಗಲಿದೆ.
ಈ ಹರಿಗೋಲಿನಿಂದ ಮೀನುಗಾರರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಸಿಎಸ್‌ಐಆರ್‌ ವಿಜ್ಞಾನಿ ಡಾ.ಎಸ್‌.ಸೆಲ್ವರಾಜನ್‌ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.