ADVERTISEMENT

ಕಳ್ಳತನಕ್ಕೆ ಬಂದ ಯುವಕ ಕಟ್ಟಡದಿಂದ ಬಿದ್ದು ಸಾವು

ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:50 IST
Last Updated 2 ಏಪ್ರಿಲ್ 2018, 19:50 IST

ಬೆಂಗಳೂರು: ಕೈಗೊಂಡನಹಳ್ಳಿಯಲ್ಲಿ ಕಳ್ಳತನ ಮಾಡಲು ಬಂದಿದ್ದ ಎನ್ನಲಾದ ಯುವಕನೊಬ್ಬ ಕಟ್ಟಡದ ಮೇಲಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.

ಸೋಮವಾರ ಮುಂಜಾನೆ 3 ಗಂಟೆಗೆ ಈ ಘಟನೆ ನಡೆದಿದೆ. ಮೃತ ಯುವಕನಿಗೆ 28ರಿಂದ 35 ವರ್ಷ ವಯಸ್ಸಾಗಿರಬಹುದು. ಆತನ ಗುರುತು ಪತ್ತೆಯಾಗಿಲ್ಲ. ಸೇಂಟ್‌ ಜಾನ್ಸ್‌ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ಇರಿಸಿದ್ದೇವೆ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದರು.

ಸರ್ಜಾಪುರ ರಸ್ತೆಯ ಕೈಗೊಂಡನಹಳ್ಳಿಯಲ್ಲಿ ಪೇಯಿಂಗ್ ಗೆಸ್ಟ್‌ ಕಟ್ಟಡವಿದೆ. ಅಲ್ಲಿ ಯುವತಿಯರು ವಾಸವಿದ್ದಾರೆ. ಅದರ ಪಕ್ಕವೇ ಮತ್ತೊಂದು ಬಹುಮಹಡಿ ಕಟ್ಟಡವಿದೆ. ಆ ಕಟ್ಟಡ ಮೂಲಕವೇ ಪೇಯಿಂಗ್ ಗೆಸ್ಟ್‌ ಕಟ್ಟಡಕ್ಕೆ ಯುವಕ ನುಗ್ಗಿದ್ದ. ಅಲ್ಲಿನ ಕೊಠಡಿಗಳ ಒಳಗೆ ಹೋಗಲು ಯತ್ನಿಸಿದ್ದ.

ADVERTISEMENT

ಅದೇ ವೇಳೆ ಎಚ್ಚರಗೊಂಡಿದ್ದ ಯುವತಿಯರಿಬ್ಬರು, ಕಳ್ಳ... ಕಳ್ಳ... ಎಂದು ಕೂಗಾಡಿದ್ದರು. ಕಟ್ಟಡದಲ್ಲಿದ್ದ ಉಳಿದ ಯುವತಿಯರೂ ಕೊಠಡಿಯಿಂದ ಹೊರಗೆ ಬಂದರು. ಆಗ ಗಾಬರಿಗೊಂಡ ಯುವಕ, ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದ. ಪಕ್ಕದ ಕಟ್ಟಡಕ್ಕೆ ಜಿಗಿಯುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದ ಎಂದು ಪೊಲೀಸರು ವಿವರಿಸಿದರು.

‘ತಲೆ ಹಾಗೂ ಎದೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳೀಯರು ನೀಡಿದ್ದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೇವೆ’ ಎಂದರು.

‘ಕಳ್ಳತನ ಉದ್ದೇಶದಿಂದಲೇ ಯುವಕ ಕಟ್ಟಡಕ್ಕೆ ಬಂದಿದ್ದ ಎಂಬುದು ಗೊತ್ತಾಗಿದೆ. ಆತ ಯಾರು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ. ಆತನ ವಿರುದ್ಧ ಈ ಮೊದಲು ಪ್ರಕರಣಗಳೇನಾದರೂ ದಾಖಲಾಗಿವೆಯೇ ಎಂಬ ಮಾಹಿತಿಯನ್ನೂ ಕಲೆ ಹಾಕುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.