ವೈಟ್ಫೀಲ್ಡ್: ಗಣೇಶನ ವಿಸರ್ಜನೆ ಸಂದರ್ಭದಲ್ಲಿ ಇಬ್ಬರು ನೀರು ಪಾಲಾಗಿ, ಮೂವರು ಪಾರಾಗಿರುವ ಘಟನೆ ಇಲ್ಲಿಗೆ ಸಮೀಪದ ವರ್ತೂರು ಕೆರೆಯಲ್ಲಿ ಶನಿವಾರ ನಡೆಯಿತು. ಸಂಜೆ ವರ್ತೂರಿನ ಕೆಲ ಯುವಕರ ತಂಡ ಗಣೇಶನ ವಿಸರ್ಜಿಸಲು ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಗಣೇಶನ ವಿಸರ್ಜಿಸಲು ಮುಂಜಾಗ್ರತ ಕ್ರಮವಾಗಿ ಗುತ್ತಿಗೆ ನೌಕರರನ್ನು ಕೆರೆಯ ಬಳಿ ನಿಯೋಜಿಸಿದ್ದರು. ಅದರಂತೆ ಶಿವು, ಯಲ್ಲಪ್ಪ, ನಾರಾಯಣಪ್ಪ, ಮಂಜು ಮತ್ತು ಮಂಜುನಾಥ ಎಂಬುವರು ಕೆರೆಯ ಸೇತುವೆ ಬಳಿ ನೀರಿಗಿಳಿದು ಸಹಕರಿಸಿದ್ದಾರೆ.
ನೀರಿನ ರಭಸಕ್ಕೆ ಸಿಲುಕಿದ ಐದು ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ತಕ್ಷಣ ಅಲ್ಲಿದ್ದ ಕೆಲ ಯುವಕರು ಹಗ್ಗದ ಸಹಾಯದಿಂದ ಶಿವು,ಯಲ್ಲಪ್ಪ ಮತ್ತು ನಾರಾಯಣಪ್ಪ ಅವರನ್ನು ಪಾರು ಮಾಡಲು ಯಶಸ್ವಿ ಆದರೂ ನಾರಾಯಣಪ್ಪ ಎಂಬುವನಿಗೆ ತೀವ್ರ ಗಾಯಗಳಾದ ಕಾರಣ ಅವರನ್ನು ವರ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು ಮಂಜುನಾಥ ಮತ್ತು ಮಂಜು ಎಂಬುವರು ಮಾತ್ರ ನೀರು ಪಾಲಾಗಿದ್ದು ಅಗ್ನಿಶಾಮಕ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಘಟನಾ ಸ್ಥಳಕ್ಕೆ ವೈಟ್ಫಿಲ್ಡ್ ಸಂಚಾರಿ ವಿಭಾಗದ ಇನ್ಸ್ಪೆಕ್ಟರ್ ಧರ್ಮಪ್ಪ, ಪೋಲಿಸ್ ಇನ್ಸ್ಪೆಕ್ಟರ್ ಬಾಬು, ಸಬ್ ಇನ್ಸ್ಪೆಕ್ಟರ್ ರಘು, ಬಿಬಿಎಂಪಿ ಮತ್ತು ಅಗ್ನಿಶಾಮಕ ಅಧಿಕಾರಿಗಳು ಆಗಮಿಸಿ ಶೋಧ ಕಾರ್ಯ ನಡೆಸಿದರು.
ಘಟನೆಯಿಂದ ವರ್ತೂರು ದೊಮ್ಮಸಂದ್ರ ಮತ್ತು ಹೊಸಕೋಟೆ ಮಾರ್ಗದ ಸಂಚಾರ ಸಂಪೂರ್ಣ ಅಸ್ತವ್ಯಸ್ತ ಗೊಂಡು ವಾಹನ ಸವಾರರು ಪರದಾಡಿದರು. ನಗರದಲ್ಲಿ ಸುರಿಯುತ್ತಿರುವ ಮಳೆಯ ನೀರು ವರ್ತೂರು ಕೆರೆಯನ್ನು ಸೇರುತ್ತದೆ. ಇದರಿಂದ ಕೆರೆಯ ಒಳ ಹರಿವು ಹೆಚ್ಚಾಗಿದೆ. ‘ಮಳೆಯಿಂದಾಗಿ ಕೆರೆ ತುಂಬಿದ್ದರಿಂದ ಸುತ್ತಮುತ್ತಲ ಸ್ಥಳ ಪರಿಶೀಲನೆ ಮಾಡುವಂತೆ ವೈಟ್ಫೀಲ್ಡ್ ವಿಭಾಗದ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಲಿಂಗೇಗೌಡ ಅವರಿಗೆ ಸೂಚನೆ ನೀಡಲಾಗಿತ್ತು.
ಆದರೆ, ಅವರು ಪರಿಶೀಲನೆಗೆ ತೆರಳದೆ ತಮ್ಮ ಖಾಸಗಿ ಕೆಲಸಕ್ಕಾಗಿ ಬೇರೆ ಊರಿಗೆ ಹೋಗಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆ ಮಾಡುವ ಗುತ್ತಿಗೆ ನೌಕರರಿಗೆ ಸುರಕ್ಷತಾ ಜಾಕೆಟ್ ಮತ್ತು ಹಗ್ಗಗಳನ್ನು ಕೊಡುವಂತೆ ಅವರಿಗೆ ಹೇಳಿದ್ದೆವು. ಆದರೆ, ಶಿವಲಿಂಗೇಗೌಡ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಘಟನೆಗೆ ಅವರೇ ನೇರ ಹೊಣೆ ಎಂದು ಸ್ಥಳೀಯ ಪಾಲಿಕೆ ಸದಸ್ಯ ಉದಯ್ ಕುಮಾರ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.