ADVERTISEMENT

ಕೃತಿಚೌರ್ಯ: ಕ್ರಮಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 19:25 IST
Last Updated 7 ಮಾರ್ಚ್ 2011, 19:25 IST

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2008ರ ವೇಳೆ ನಡೆದ ಕೃತಿ ಚೌರ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ರಾಜ್ಯಪಾಲರು ಹೊರಡಿಸಿರುವ ಆದೇಶದ ಅನ್ವಯ ನಾಲ್ಕು ವಾರಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸೋಮವಾರ ಹೈಕೋರ್ಟ್ ಸರ್ಕಾರ ಹಾಗೂ ವಿವಿಗೆ ನಿರ್ದೇಶಿಸಿದೆ.ವಿವಿಯ ಉಪನ್ಯಾಸಕ ಡಾ.ಎಂ.ವೆಂಕಟರಮಣಪ್ಪ ಹಾಗೂ ಅವರ ಮಾರ್ಗದರ್ಶಕರಾಗಿದ್ದ ಅಂಚೆ ತೆರಪು ಶಿಕ್ಷಣದ ಅಂದಿನ ನಿರ್ದೇಶಕ ಬಿ.ಸಿ. ಮೈಲಾರಪ್ಪ ವಿರುದ್ಧ ರಾಜ್ಯಪಾಲರು ಅದೇ ಸಾಲಿನ ಜೂನ್ 4ರಂದು ಹೊರಡಿಸಿರುವ ಆದೇಶ ಇದಾಗಿದೆ.

2002ರಲ್ಲಿ ‘ಗ್ರಾಮಾಂತರ ಪ್ರದೇಶಗಳಲ್ಲಿನ ರೈತರು- ಒಂದು ಸಾಮಾಜಿಕ ಅಧ್ಯಯನ’ ಕುರಿತು ವೆಂಕಟರಮಣಪ್ಪ ಮಂಡಿಸಿದ್ದ ಅಧ್ಯಯನಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪ್ರದಾನ ಮಾಡಿತ್ತು. ಆದರೆ ಈ ಪ್ರಬಂಧವು ಬೇರೊಂದು ಪ್ರಬಂಧದ ಕೃತಿಚೌರ್ಯವಾಗಿದೆ ಎಂಬ ಆರೋಪ ಇದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರು ಮೂವರು ತಜ್ಞರ ಸಮಿತಿಯನ್ನು ರಚಿಸಿ ಇಬ್ಬರ ವಿರುದ್ಧ ತನಿಖೆಗೆ ಸೂಚಿಸಿ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದರು. ಈ ಶಿಫಾರಸಿನ ಅನ್ವಯ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್‌ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ. ಕ್ರಮ ತೆಗೆದುಕೊಂಡ ನಂತರದ ನಾಲ್ಕು ವಾರಗಳಲ್ಲಿ ಮುಂದಿನ ಪ್ರಕ್ರಿಯೆ ನಡೆಸುವಂತೆ ವಿವಿಗೆ ಕೋರ್ಟ್ ಸೂಚಿಸಿದೆ.

ಅಂತೆಯೇ, ಮೈಲಾರಪ್ಪನವರು ಬೆಂಗಳೂರು ವಿ.ವಿ ದೂರ ಶಿಕ್ಷಣ ವಿಭಾಗದ ನಿರ್ದೇಶಕರಾಗಿದ್ದ ವೇಳೆ 19.58 ಲಕ್ಷ ರೂಪಾಯಿಗಳ ಅವ್ಯವಹಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿದ ಅರ್ಜಿಯನ್ನು ಪೀಠ ವಜಾ ಮಾಡಿದೆ. ಈ ಬಗ್ಗೆ ಸರ್ಕಾರವೇ ಅಗತ್ಯ ಬಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಪೀಠ ಹೇಳಿದೆ. ಮೈಲಾರಪ್ಪ ಹಾಗೂ ವೆಂಕಟರಮಣಪ್ಪನವರ ವಿರುದ್ಧ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್‌ನ ಮಾಜಿ ಸದಸ್ಯ ಎಲ್.ವಾಸುದೇವಮೂರ್ತಿ ಅವರು ಸಲ್ಲಿಸಿರುವ ಸಾರ್ವಜನಿಕ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.