ADVERTISEMENT

ಕೆಎಸ್‌ಆರ್‌ಪಿ ವ್ಯಾನ್ ಡಿಕ್ಕಿ: ಬಾಲಕ ದುರ್ಮರಣ

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST

ಬೆಂಗಳೂರು: ಆರ್‌ಎಂಸಿ ಯಾರ್ಡ್‌ ಸಮೀಪದ ಆಶ್ರಯ ನಗರದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ವ್ಯಾನ್‌ ಗುದ್ದಿದ್ದರಿಂದಾಗಿ ಗಿರಿಪ್ರಕಾಶ್ (2) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆತ, ಸ್ಥಳೀಯ ನಿವಾಸಿ ವಿಕ್ಟರಿ ವೇಲು ಮತ್ತು ಲತಾ ದಂಪತಿ ಪುತ್ರ. ಘಟನೆ ಸಂಬಂಧ ವ್ಯಾನ್‌ ಚಾಲಕನನ್ನು ಯಶವಂತಪುರ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಕೂಲಿ ಕಾರ್ಮಿಕರಾಗಿರುವ ವಿಕ್ಟರಿ ವೇಲು, ತಿಂಡಿ ಕೊಡಿಸಲೆಂದು ಮಗನನ್ನು ಬೆಳಿಗ್ಗೆ ಅಂಗಡಿಗೆ ಕರೆದುಕೊಂಡು ಹೋಗಿದ್ದರು. ತಿಂಡಿ ಖರೀದಿಸಿ ಮಗನ ಕೈಗೆ ಕೊಟ್ಟಿದ್ದರು. ತಾವು ಅಂಗಡಿಯವನಿಗೆ ಹಣ ಕೊಡುತ್ತಿದ್ದರು. ತಿಂಡಿ ಕೈಯಲ್ಲಿ ಹಿಡಿದುಕೊಂಡಿದ್ದ ಗಿರಿಪ್ರಕಾಶ್, ಓಡುತ್ತ ರಸ್ತೆ ದಾಟಲು ಯತ್ನಿಸಿದ್ದ. ಅದೇ ವೇಳೆಯಲ್ಲೇ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾನ್‌ ಆತನಿಗೆ ಗುದ್ದಿತ್ತು ಎಂದು ತಿಳಿಸಿದರು.

ADVERTISEMENT

ವಾಹನ ಗುದ್ದಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಬಾಲಕ, ಪ್ರಜ್ಞೆ ಕಳೆದುಕೊಂಡಿದ್ದ. ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಆತ ಮೃತಪಟ್ಟಿರುವುದಾಗಿ ಹೇಳಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣೆ ಭದ್ರತೆಗಾಗಿ ನಿಯೋಜಿಸಲಾಗಿದ್ದ ಕೆಎಸ್‌ಆರ್‌ಪಿ ಸಿಬ್ಬಂದಿ ಸಂಚಾರಕ್ಕೆ ವ್ಯಾನ್‌ ನೀಡಲಾಗಿತ್ತು. ಬೆಳಗ್ಗೆ 5.30 ಗಂಟೆ ಸುಮಾರಿಗೆ ವ್ಯಾನ್, ಸೋಲದೇನಹಳ್ಳಿಯತ್ತ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ. ಘಟನೆ ಸಂಭವಿಸಿದ್ದ ವೇಳೆ ವ್ಯಾನ್‌ನಲ್ಲಿ ಸಿಬ್ಬಂದಿ ಸಹ ಇದ್ದರು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.