ADVERTISEMENT

ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:05 IST
Last Updated 11 ಜನವರಿ 2012, 19:05 IST

ಬೆಂಗಳೂರು: ವನ್ಯ ಜೀವಿಗಳು ನಾಡಿಗೆ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದರೂ, ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬುಧವಾರ ನಗರದ ಮಲ್ಲೇಶ್ವರದಲ್ಲಿರುವ ಅರಣ್ಯ ಭವನದ ಕಚೇರಿಗೆ ಬೇಲಿ ಹಾಕಿ ಪ್ರತಿಭಟನೆ ಮಾಡಿದರು.

ಪ್ರತಿದಿನ ಕಾಡು ಪ್ರಾಣಿಗಳು ನಾಡಿಗೆ ಬಂದು ರೈತರ ಬೆಳೆಯನ್ನು ನಿರಂತರವಾಗಿ ಹಾಳು ಮಾಡುತ್ತಿವೆ. ಈ ಪ್ರಕ್ರಿಯೆಯಿಂದ ಮನುಷ್ಯರೂ ಸೇರಿದಂತೆ ವನ್ಯ ಜೀವಿಗಳಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಮೈಸೂರಿನಲ್ಲಿ ಆನೆ ದಾಳಿಗೆ ಒಬ್ಬ ಸಾವನ್ನಪಿದ ಘಟನೆ ಮಾಸುವ ಮುನ್ನವೇ ಬನ್ನೇರುಘಟ್ಟದಲ್ಲಿ ಆನೆಯ ಆಕ್ರೋಶಕ್ಕೆ ಮತ್ತೊಬ್ಬ ತುತ್ತಾಗಿದ್ದಾನೆ. ಅಲ್ಲದೇ ಹಾಸನದ ಆಲೂರಿನಲ್ಲಿ ಆನೆಗಳ ದಾಳಿಗೆ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದ ಅರಣ್ಯ ಪ್ರದೇಶದ ಜನರು ಭಯದ ನೆರಳಲ್ಲಿ ಜೀವನ ನಡೆಸುತ್ತಿದ್ದಾರೆ. 

ಅರಣ್ಯ ಭಾಗದ ಸುತ್ತಲೂ ತಡೆಗೋಡೆಗಳನ್ನು ಹಾಗೂ ಸೌರಶಕ್ತಿ ಬೇಲಿಗಳನ್ನು ನಿರ್ಮಿಸುವ ಮೂಲಕ ಅರಣ್ಯ ಇಲಾಖೆ ಶೀಘ್ರವೇ ಸಮಸ್ಯಗೆ ಶಾಶ್ವತ ಪರಿಹಾರ ನೀಡಬೇಕು ಎಂದರು.

ಪ್ರಾಣಿಗಳ ದಾಳಿ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದರೆ ಅವರು ಬರುವುದರೊಳಗೆ ಅನಾಹುತ ನಡೆದು ಹೋಗಿರುತ್ತದೆ. ಅರಣ್ಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೂಕ್ತ ಸಲಕರಣೆಗಳಿಲ್ಲದೆ ಅವರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದರು. ಪ್ರತಿಭಟನೆಯಲ್ಲಿ ಶಾಸಕ ನೆ.ಲ.ನರೇಂದ್ರಬಾಬು, ಸಂಘಟನೆಯ ಅಧ್ಯಕ್ಷ ಟಿ.ಆರ್.ಶ್ರೀನಿವಾಸ್, ನಗರ ಯುವ ಕಾಂಗ್ರೆಸ್ ಸಮಿತಿಯ ಮುಖಂಡ ಎಸ್. ಮನೋಹರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.