ADVERTISEMENT

ಕ್ರೈಸ್‌: ಯಥಾಸ್ಥಿತಿ ಆದೇಶ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:25 IST
Last Updated 9 ಏಪ್ರಿಲ್ 2018, 19:25 IST

ಬೆಂಗಳೂರು: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡಗಳ ಕಾಮಗಾರಿ ಗುತ್ತಿಗೆಗೆ ಸಂಬಂಧಿಸಿದ ಟೆಂಡರ್‌ ಪ್ರಕ್ರಿಯೆ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಪಾಡಬೇಕು ಎಂಬ ಈ ಹಿಂದಿನ ಆದೇಶವನ್ನು ಹೈಕೋರ್ಟ್‌ ಸೋಮವಾರ ಮಾರ್ಪಾಡು ಮಾಡಿದೆ.

ಈ ಕುರಿತಂತೆ ಮೈಕಾನ್‌ ಕನ್‌ಸ್ಟ್ರಕ್ಷನ್ ಕಂಪನಿ ನಿರ್ದೇಶಕ ಸುದರ್ಶನ್‌ ಮಾಲ್ಪಾನಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಅರ್ಜಿದಾರರು ಟೆಂಡರ್ ಬಿಡ್ ಸಲ್ಲಿಸಿದ್ದ ಮುಂಡಗೋಡು ಮತ್ತು ಗೇರಾಪುರದ ಎರಡು ಯೋಜನೆಗಳಿಗೆ ಮಾತ್ರ ತಡೆಯಾಜ್ಞೆ ನೀಡಿದೆ. ಉಳಿದ ಯೋಜನೆಗಳಿಗೆ ನೀಡಿದ್ದ ಮಧ್ಯಂತರ ತಡೆ ತೆರವಿಗೆ ಆದೇಶಿಸಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಪರ ವಾದ ಮಂಡಿಸಿದ ವಕೀಲರು, ‘ಅರ್ಜಿದಾರರು ಟೆಂಡರ್ ಸಲ್ಲಿಸಿರುವುದು ಕೇವಲ ಎರಡು ಬಿಡ್‌ಗಳಿಗೆ. ಆದರೆ, ನ್ಯಾಯಪೀಠ ಎಲ್ಲ ಬಿಡ್‌ಗಳಿಗೂ ತಡೆ ನೀಡಿದೆ. ಹಾಗಾಗಿ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿರುವ ಬಿಡ್‌ಗಳನ್ನು ಹೊರತುಪಡಿಸಿ ಉಳಿದ ಬಿಡ್‌ಗಳ ಮುಂದುವರಿಕೆಗೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದನ್ನು ಮನ್ನಿಸಿದ ನ್ಯಾಯಪೀಠ ತನ್ನ ಈ ಹಿಂದಿನ ಆದೇಶದಲ್ಲಿ ಮಾರ್ಪಾಡು ಮಾಡಿದೆ.

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು (ಕ್ರೈಸ್) ವಿವಿಧ ಕಾಮಗಾರಿಗಳಿಗೆ ಕರೆದಿರುವ
₹800 ಕೋಟಿ ಮೊತ್ತದ ಟೆಂಡರ್ ಅನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.