ADVERTISEMENT

ಗೂಡ್ಸ್ ವಾಹನಕ್ಕೆ ಬೈಕ್ ಗುದ್ದಿ ಟೆಕಿ ಸಾವು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST

ಬೆಂಗಳೂರು: ಮಡಿವಾಳ ಸಮೀಪದ ಗಾರ್ವೆಪಾಳ್ಯದಲ್ಲಿ ಗೂಡ್ಸ್‌ ವಾಹನಕ್ಕೆ ಬೈಕ್‌ ಗುದ್ದಿದ್ದರಿಂದ ಸವಾರ ಸಾಗರ್‌ ಪ್ರಭಾಕರ್‌ ಶೆಟ್ಟಿ (25) ಎಂಬುವರು ಮೃತಪಟ್ಟಿದ್ದಾರೆ.

ಕಾರ್ಕಳದ ಅವರು ಬೊಮ್ಮನಹಳ್ಳಿಯ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಹೊಸಪಾಳ್ಯದಲ್ಲಿ ವಾಸವಿದ್ದರು. ಭಾನುವಾರ ರಾತ್ರಿ 1.15 ಗಂಟೆ ಸುಮಾರಿಗೆ ಬೊಮ್ಮನಹಳ್ಳಿಯಲ್ಲಿರುವ ಸ್ನೇಹಿತನ ಮನೆಗೆ ಬೈಕ್‍ನಲ್ಲಿ ಹೊರಟಿದ್ದರು. ಅದೇ ವೇಳೆ ರಸ್ತೆ ಮಧ್ಯೆ ನಿಂತಿದ್ದ ವಾಹನಕ್ಕೆ ಬೈಕ್‌ ಡಿಕ್ಕಿ ಹೊಡೆದಿತ್ತು ಎಂದು ಮಡಿವಾಳ ಸಂಚಾರ ಪೊಲೀಸರು ತಿಳಿಸಿದರು.

ಬೈಕ್‌ನಿಂದ ಬಿದ್ದ ಸಾಗರ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ರಸ್ತೆಯಲ್ಲಿ ನರಳುತ್ತಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆಯೇ ಅಸುನೀಗಿದರು ಎಂದರು.

ADVERTISEMENT

‘ಗೂಡ್ಸ್ ವಾಹನವನ್ನು ರಸ್ತೆ ಮಧ್ಯೆ ನಿಲ್ಲಿಸಿದ್ದೇ ಘಟನೆಗೆ ಕಾರಣ. ಚಾಲಕ ಮೊಹಮ್ಮದ್ ಖಾನ್‍ ಎಂಬಾತನನ್ನು ಬಂಧಿಸಿದ್ದೇವೆ’ ಎಂದರು.

ಟೆಂ‍ಪೊ– ಮಿನಿ ಬಸ್‌ ಡಿಕ್ಕಿ:

ರಾಜಾಜಿನಗರದ ನವರಂಗ್ ವೃತ್ತದಲ್ಲಿ ಟೆಂಪೊ ಹಾಗೂ ಮಿನಿ ಬಸ್‌ ನಡುವೆ ಸೋಮವಾರ ಬೆಳಿಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ.

ಬಸ್‌ ಚಾಲಕ ಅಭಿಷೇಕ್‌ (35), ಟೆಂಪೊದಲ್ಲಿದ್ದ ಸಿದ್ದವೀರಯ್ಯ ಹಾಗೂ ಪುಟ್ಟರಾಜು ಗಾಯಗೊಂಡವರು. ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ನವರಂಗ್‌ ವೃತ್ತ ಹಾಗೂ ಸುತ್ತಮುತ್ತ ದಟ್ಟಣೆ ಉಂಟಾಯಿತು‌.

‘ಖಾಸಗಿ ಕಂಪನಿಗೆ ಸೇರಿದ್ದ ಬಸ್‌ ಇದಾಗಿದ್ದು, ಉದ್ಯೋಗಿಗಳನ್ನು ಕರೆದೊಯ್ಯುವುದಕ್ಕಾಗಿ ನವರಂಗ್ ವೃತ್ತದ ಮೂಲಕ ವಿಜಯನಗರಕ್ಕೆ ಹೊರಟಿತ್ತು. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ರಸ್ತೆಯಲ್ಲೇ ಟೆಂಪೊ ಉರುಳಿಬಿದ್ದಿತ್ತು’ ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.