ನೆಲಮಂಗಲ: ‘ರೈತರು ಕೃಷಿಯೊಂದಿಗೆ ಪಶುಪಾಲನೆ, ಕುರಿ, ಜೇನು ಸಾಕಣೆಗೆ ಆದ್ಯತೆ ನೀಡಬೇಕು’ ಎಂದು ಕೃಷಿ ವಿಜ್ಞಾನಿ ಡಾ.ಸಿ.ಡಿ.ರಾಜಗೋಪಾಲ ಸಲಹೆ ನೀಡಿದರು.
ಸ್ಥಳೀಯ ಬಸವಣ್ಣ ದೇವರ ಮಠದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಉತ್ಸವ ಹಾಗೂ ಸಿರಿ ಧಾನ್ಯ ಮೇಳ ಉದ್ಘಾಟಿಸಿ ಮಾತನಾಡಿ, ‘ರೈತರು ಅಧಿಕ ಪೌಷ್ಟಿಕಾಂಶವಿರುವ ಜೋಳ, ಸಜ್ಜೆ, ರಾಗಿ, ನವಣೆ ಬೆಳೆಯಬೇಕು’ ಎಂದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾದೇವಿ ಮಾತನಾಡಿ, ಸಿರಿಧಾನ್ಯಗಳಿಗೆ ಅಗ್ರ ಸ್ಥಾನ ನೀಡಬೇಕು ಎಂದರು.
ಸಹಾಯಕ ನಿರ್ದೇಶಕ ಡಾ.ಹನುಮಂತರಾಜು, ಡಾ. ರಾಮಮೂರ್ತಿ, ಡಾ.ಕೃಷ್ಣಮೂರ್ತಿ, ಶ್ರೀನಿವಾಸಮೂರ್ತಿ, ಡಾ.ಉಮೇಶ್ ಚಂದ್ರ ಮಾಹಿತಿ ನೀಡಿದರು.
ಕೂಡಲ ಸಂಗಮ ಸಹಕಾರ ಸಂಘ ಉದ್ಘಾಟನೆ
ಸ್ಥಳೀಯ ಉತ್ತರ ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಕೂಡಲಸಂಗಮ ವಿವಿಧೋದ್ದೇಶ ಸೌರ್ಹದ ಸಹಕಾರ ಸಂಘವು ಭಾನುವಾರ ಷೇರು ಸಂಗ್ರಹಣಾ ಸಮಾರಂಭಕ್ಕೆ ಚಾಲನೆ ನೀಡಲಿದೆ.
ಬೆಳಿಗ್ಗೆ 10ಕ್ಕೆ ಬಸವಣ್ಣದೇವರ ಮಠದ ಶ್ರೀಗಳ ಸಾನಿಧ್ಯದಲ್ಲಿ ಸಹಕಾರ ಇಲಾಖೆ ಕಾರ್ಯದರ್ಶಿ ಡಾ.ಸಿ .ಸೋಮಶೇಖರ್ ಅವರು ಸಭೆಯನ್ನು ಉದ್ಘಾಟಿಸುವರು.
‘ಪ್ರಾಮುಖ್ಯತೆ ಕಳೆದುಕೊಳ್ಳುತ್ತಿರುವ ಗ್ರಾಮೀಣ ಕಲೆ’
‘ಆಧುನಿಕತೆ ಬೆಳೆದಂತೆ ಗ್ರಾಮೀಣ ಕಲೆಗಳು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿವೆ’ ಎಂದು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆ.ವಿ.ರುದ್ರಪ್ಪ ಬೇಸರ ವ್ಯಕ್ತಪಡಿಸಿದರು.
ನೆಲಮಂಗಲ ತಾಲ್ಲೂಕಿನ ಚಿಕ್ಕಮಾರನಹಳ್ಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿನಾಯಕ ಯುವಕರ ವಿವಿಧೋದ್ದೇಶ ರೈತ ಶಕ್ತಿ ಸಂಘ ಆಯೋಜಿಸಿದ್ದ ‘ಶಿವ ಜಲಂಧರ’ ಪೌರಾಣಿಕ ನಾಟಕದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪೌರಾಣಿಕ ನಾಟಕಗಳು ಮಹತ್ವದ ಪಾತ್ರ ವಹಿಸುತ್ತಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.