ಬೆಂಗಳೂರು: ಬಿಎಂಟಿಸಿಯ ಕತ್ತರಿಗುಪ್ಪೆ ಡಿಪೊ (ಡಿಪೊ 13) ವ್ಯವಸ್ಥಾಪಕ ಚಂದ್ರಶೇಖರ್ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾಲಕರು ಹಾಗೂ ನಿರ್ವಾಹಕರು ಸೋಮವಾರ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಆ ಭಾಗದಲ್ಲಿ ಬಸ್ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಉಂಟಾಯಿತು.
ಸಿಐಟಿಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 750 ಮಂದಿ ಪಾಲ್ಗೊಂಡಿದ್ದರು. ಇದರಿಂದಾಗಿ ಬೆಳಿಗ್ಗೆ 6.30ರಿಂದ ಮಧ್ಯಾಹ್ನ 12ರ ವರೆಗೆ 150 ಬಸ್ಗಳು ಸಂಚಾರ ನಡೆಸಲಿಲ್ಲ. ಇದರಿಂದಾಗಿ ಪ್ರಯಾಣಿಕರು ಪಡಿಪಾಟಲುಪಟ್ಟರು. ಹಿರಿಯ ಅಧಿಕಾರಿಗಳ ಸಂಧಾನದ ಬಳಿಕ ಪ್ರತಿಭಟನೆ ಕೈಬಿಟ್ಟರು.
‘ಸಿಬ್ಬಂದಿಗೆ ರಜೆ ಕೊಡಲು ಚಂದ್ರಶೇಖರ್ ಸತಾಯಿಸುತ್ತಿದ್ದರು. ಏಕವಚನದಲ್ಲಿ ನಿಂದಿಸುತ್ತಿದ್ದರು. ಐವರು ಸಿಬ್ಬಂದಿಯನ್ನು ಅಮಾನತು ಮಾಡಲು ಸಿದ್ಧತೆ ಮಾಡಿದ್ದರು. ಅವರ ಕಿರುಕುಳ ಮಿತಿಮೀರಿತ್ತು’ ಎಂದು ಸಿಐಟಿಯು ಮುಖಂಡ ಆನಂದ್ ಆರೋಪಿಸಿದರು.
‘ಅವರು ಈ ಹಿಂದೆ 41ನೇ ಡಿಪೊದಲ್ಲಿದ್ದರು. ಅಲ್ಲಿಯೂ ಸಿಬ್ಬಂದಿಗೆ ಕಿರುಕುಳ ನೀಡಿದ್ದರು. ಪ್ರತಿಭಟನೆ ನಡೆಸಿದ ಬಳಿಕ ಡಿಪೊ 39ಕ್ಕೆ ವರ್ಗಾವಣೆ ಮಾಡಲಾಗಿತ್ತು. ಆ ನಂತರ ಡಿಪೊ 18ಕ್ಕೆ ವರ್ಗವಾಗಿದ್ದರು. ಇಂತಹ ಅಧಿಕಾರಿಯಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಚಾಲಕರೊಬ್ಬರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.