ADVERTISEMENT

ತಾತ್ಕಾಲಿಕ ಪೆಂಡಾಲ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 18:30 IST
Last Updated 9 ಜುಲೈ 2012, 18:30 IST

ಬೆಂಗಳೂರು: ಶೆಟ್ಟರ್ ನಿವಾಸದ ಆವರಣದಲ್ಲಿ ತಾತ್ಕಾಲಿಕವಾಗಿ ಎರಡು ಪೆಂಡಾಲ್‌ಗಳನ್ನು ಹಾಕಲಾಗಿದೆ. ಅಭಿನಂದನೆ ಸಲ್ಲಿಸಲು ಬಂದವರಿಗೆ ಸೋಮವಾರ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿತ್ತು.
ಉಪಾಹಾರಕ್ಕೆ ಕೇಸರಿಬಾತ್, ಖಾರಾಬಾತ್, ಮಸಾಲೆ ದೋಸೆ, ಇಡ್ಲಿ, ಊಟಕ್ಕೆ ಪೂರಿ, ಪುಲಾವ್, ಅನ್ನ-ಸಾರು ನೀಡಲಾಯಿತು. ಅತಿಥಿಗಳು, ಸಿಬ್ಬಂದಿಯ ಊಟದ ವ್ಯವಸ್ಥೆಗಾಗಿ ಕಾಯಂ ಪೆಂಡಾಲ್ ಹಾಗೂ ವಾಹನ ನಿಲುಗಡೆಗೆ ಶೆಡ್ ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ.

ಮುಖ್ಯಮಂತ್ರಿಯಾದ ನಂತರವೂ ಶೆಟ್ಟರ್ ಅವರು ಈಗಿನ `ಕಾವೇರಿ~ ನಿವಾಸದಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿರುವುದರಿಂದ ನಿವಾಸದ ಹೊರಗೆ ಸಣ್ಣಪುಟ್ಟ ಬದಲಾವಣೆ ಮಾಡಲಾಗುತ್ತದೆ. ಮನೆಯ ಎಡ ಭಾಗದಲ್ಲಿರುವ ಕೈತೋಟಕ್ಕೆ ಹೊಂದಿಕೊಂಡಂತೆ ಶೆಡ್ ನಿರ್ಮಿಲಾಗುತ್ತದೆ ಎನ್ನಲಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೋಮವಾರ ಬೆಳಿಗ್ಗೆಯೇ `ಕಾವೇರಿ~ಗೆ ಆಗಮಿಸಿ ಅಗತ್ಯ ಬದಲಾವಣೆ ಬಗ್ಗೆ ಶೆಟ್ಟರ್ ಅವರೊಂದಿಗೆ ಚರ್ಚಿಸಿದರು.

ಹೊಸ ಪೀಠೋಪಕರಣ: ಮುಖ್ಯಮಂತ್ರಿಯಾಗಿ ಶೆಟ್ಟರ್ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಲೋಕೋಪಯೋಗಿ ಇಲಾಖೆಯು ಅವರ ನಿವಾಸಕ್ಕೆ ಹೊಸ ಸೋಫಾ, ಮೇಜು, ಕುರ್ಚಿ ಇತ್ಯಾದಿ ಪೀಠೋಪಕರಣಗಳ ವ್ಯವಸ್ಥೆ ಮಾಡಿದೆ. ಸೋಮವಾರ ಬೆಳಿಗ್ಗೆ ಕೆಲವೊಂದು ಪೀಠೋಪಕರಣಗಳನ್ನು ನಿವಾಸಕ್ಕೆ ತರಲಾಯಿತು. ಮಂಗಳವಾರ ಇನ್ನೂ ಕೆಲವು ಪೀಠೋಪಕರಣಗಳನ್ನು ಅಳವಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.