ADVERTISEMENT

ದರೋಡೆಗೆ ಹೊಂಚು: ನಾಲ್ಕು ರೌಡಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಬೆಂಗಳೂರು: ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಕುಖ್ಯಾತ ರೌಡಿ ಜರಗನಹಳ್ಳಿ ಮಹೇಶ (28) ಮತ್ತು ಆತನ ಸಹಚರರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ರಿವಾಲ್ವರ್, ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆ.ಪಿ.ನಗರದ ಎಲ್.ಮಹೇಶ ಅಲಿಯಾಸ್ ಮೆಂಟಲ್ ಮಹೇಶ (23), ರಾಮನಗರ ಜಿಲ್ಲೆಯ ಎಂ.ಎಸ್.ಹರೀಶ್ (26) ಉರುಫ್ ಕತ್ತೆ ಮತ್ತು ಸಾತನೂರಿನ ವಿನೋದ್‌ಕುಮಾರ್ (27) ಇತರೆ ಬಂಧಿತ ಆರೋಪಿಗಳು.

ಆರೋಪಿಗಳು ಮೈಕೊಲೇಔಟ್ ಸಮೀಪದ ಸುದ್ದಗುಂಟೆಪಾಳ್ಯ ಸಮೀಪ ಎದುರಾಳಿ ಗುಂಪಿನ ಜರಗನಹಳ್ಳಿ ಸಂಜೀವ್‌ನನ್ನು ಕೊಲೆ ಮಾಡಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು.

ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು. ಪ್ರಕರಣದ ಮತ್ತೊಬ್ಬ ಆರೋಪಿ ಮಧು ಎಂಬಾತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜರಗನಹಳ್ಳಿ ಮಹೇಶ ಮತ್ತು ಸಂಜೀವ್ ನಡುವೆ ರಿಯಲ್ ಎಸ್ಟೇಟ್ ವ್ಯವಹಾರದ ವಿಷಯವಾಗಿ ಭಿನ್ನಾಭಿಪ್ರಾಯವಿತ್ತು. ಈ ಕಾರಣಕ್ಕಾಗಿ ಆರೋಪಿಗಳು ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

ಜೆ.ಪಿ.ನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಜರಗನಹಳ್ಳಿ ಮಹೇಶನ ಹೆಸರಿದೆ. ಅಲ್ಲದೇ ಆತನ ವಿರುದ್ಧ ಎರಡು ಕೊಲೆ, ದರೋಡೆ, ಕೊಲೆ ಯತ್ನ, ಹಲ್ಲೆ ಮತ್ತಿತರ ಪ್ರಕರಣಗಳು ದಾಖಲಾಗಿದ್ದವು.

ಅಪರಾಧ ವಿಭಾಗದ (ಪೂರ್ವ) ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಎಸ್.ವೈ.ಹಾದಿಮನಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.