ಬೆಂಗಳೂರು: ದೂರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದಕ್ಕಾಗಿ ಜ್ಞಾನಭಾರತಿ ಆವರಣದಲ್ಲಿ ₹10 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣಕ್ಕೆ ಸ್ವಾತಂತ್ರ್ಯ ಕಟ್ಟಡ ಇಲ್ಲ. ಹೆಚ್ಚಿನ ಸೌಕರ್ಯ ಕಲ್ಪಿಸಲು ಕಟ್ಟಡ ಅಗತ್ಯವಿದ್ದು, ಮುಂದಿನ ತಿಂಗಳು ಶಂಕುಸ್ಥಾಪನೆ ನೆರವೇರಿಸಲು ತೀರ್ಮಾನಿಸಲಾಯಿತು.
ಯುಜಿಸಿ ನಿಯಮ ಅನುಸಾರ ಕೋರ್ಸ್ಗಳ ಆರಂಭ, ನಿರ್ವಹಣೆ ಸೇರಿ ದೂರ ಶಿಕ್ಷಣ ಕುರಿತ ಸಮಗ್ರ ಸುಧಾರಣೆಗಾಗಿ ಗುಜರಾತ್ ಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಪ್ರೊ.ಎಚ್.ಎಲ್ ಹಿರೇಮಠ ಅವರನ್ನು ದೂರ ಶಿಕ್ಷಣದ ಸಲಹೆಗಾರರನ್ನಾಗಿ ನೇಮಿಸಲಾಗಿದೆ.
ಹೊಸ ಕೋರ್ಸ್ಗಳ ಆರಂಭ, ಬಡ ಮಕ್ಕಳಿಗೆ ಶುಲ್ಕ ವಿನಾಯಿತಿ ಸೇರಿದಂತೆ 12 ಅಂಶಗಳನ್ನು ದೂರ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಬಿ.ಸಿ.ಮೈಲಾರಪ್ಪ ಅವರು ಸಿಂಡಿಕೇಟ್ ಸಭೆ ಮುಂದಿಟ್ಟಿದ್ದರು. ‘ಎರಡು ಪ್ರಮುಖ ಕಾರ್ಯಗಳಿಗೆ ಒಪ್ಪಿಗೆ ಸೂಚಿಸಿದ ಸಿಂಡಿಕೇಟ್ ಸದಸ್ಯರು ಉಳಿದ ಅಂಶಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಮುಂದಿನ ಸಭೆಗೆ ಮುಂದೂಡಿದರು’ ಎಂದು ಮೂಲಗಳು ತಿಳಿಸಿವೆ
‘ಸೆಂಟ್ ಜೋಸೆಫ್ ಕಾಲೇಜಿಗೆ ಡೀಮ್ಡ್ ವಿಶ್ವವಿದ್ಯಾಲಯ ಮಾನ್ಯತೆ ನೀಡುವ ವಿಚಾರ ಸಭೆಯಲ್ಲಿ ಹೆಚ್ಚು ಗದ್ದಲ ಸೃಷ್ಟಿಸಿತು. ಕೆಲ ಸದಸ್ಯ
ರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಹಾಗೂ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಮೀಸಲಾತಿ ವಿಚಾರ ಚರ್ಚೆ ಕೈಗೆತ್ತಿಕೊಂಡಿದ್ದರಿಂದ ಡೀಮ್ಡ್ ವಿಶ್ವವಿದ್ಯಾಲಯ ವಿಚಾರದ ಚರ್ಚೆ ಪೂರ್ಣಗೊಳ್ಳಲಿಲ್ಲ’ ಎಂದು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.