ADVERTISEMENT

ನಟ ದರ್ಶನ್ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ಬೆಂಗಳೂರು: `ಬೃಂದಾವನ' ಸಿನಿಮಾದ ಚಿತ್ರೀಕರಣದ ವೇಳೆ ಕತ್ತು ಉಳುಕಿದ್ದರಿಂದ ನಟ ದರ್ಶನ್ ಅವರು ಶುಕ್ರವಾರ ಬೆಳಿಗ್ಗೆ ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

`ಕತ್ತಿನ ಭಾಗದಲ್ಲಿ ನೋವಿರುವುದಾಗಿ ದರ್ಶನ್, ಬೆಳಿಗ್ಗೆ 3 ಗಂಟೆಗೆ ಆಸ್ಪತ್ರೆಗೆ ಬಂದರು. ಎಂಆರ್‌ಐ ಮತ್ತು ಸಿ.ಟಿ ಸ್ಕ್ಯಾನ್ ಮಾಡಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಸದ್ಯ ಅವರು ಚೇತರಿಸಿಕೊಂಡಿದ್ದು ಶೀಘ್ರವೇ ಮನೆಗೆ ಕಳುಹಿಸಲಾಗುವುದು' ಎಂದು ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ ತಿಳಿಸಿದರು.

ದರ್ಶನ್ ಅವರ `ಬೃಂದಾವನ' ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ಕಳೆದ ವಾರ ಮೈಸೂರಿನಲ್ಲಿ ನಡೆಯಿತು. ಈ ವೇಳೆ ದರ್ಶನ್ ಅವರ ಕತ್ತು ಉಳುಕಿತ್ತು. ಆದರೆ, ಆ ಸಂದರ್ಭದಲ್ಲಿ ನೋವು ಇರದ ಕಾರಣ ಅವರು ಚಿಕಿತ್ಸೆ ಪಡೆದಿರಲಿಲ್ಲ. ಗುರುವಾರ ರಾತ್ರಿ ಕುತ್ತಿಗೆ ಹಾಗೂ ತಲೆ ನೋವು ಹೆಚ್ಚಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು' ಎಂದು ದರ್ಶನ್ ಕುಟುಂಬದ ಸದಸ್ಯರು ತಿಳಿಸಿದರು.

ಅಂಬರೀಷ್, ಸುದೀಪ್, ಪ್ರೇಮ್, ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ಸಿನಿಮಾ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.