ಬೆಂಗಳೂರು: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಬ್ಯಾಟರಾಯನಪುರ ವ್ಯಾಪ್ತಿಯ ನವ್ಯನಗರದ ಮೊದಲನೇ ಕ್ರಾಸ್ನಲ್ಲಿ ರಸ್ತೆ ಕುಸಿದು ಹೊಂಡ ಸೃಷ್ಟಿಯಾಗಿದೆ. ಸಂಚಾರ ಬಂದ್ ಆಗಿದ್ದು, ಸ್ಥಳೀಯ ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ.
ರಸ್ತೆಯು ಆರೇಳು ಅಡಿ ಆಳಕ್ಕೆ, ಇಪ್ಪತ್ತು ಅಡಿ ಅಗಲದಷ್ಟು ಕುಸಿದಿದೆ. ಪಾದಚಾರಿಗಳ ಓಡಾಟ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಎರಡು ಸಣ್ಣ ಮರಗಳು ಮುರಿದು ಬಿದ್ದಿದ್ದು, ಒಳಚರಂಡಿ ಪೈಪ್ ಸಹ ಒಡೆದಿದೆ. ವಾಹನಗಳನ್ನು ಮನೆಯಿಂದ ಆಚೆಗೆ ತೆಗೆಯಲು ಸಾಧ್ಯವಾಗುತ್ತಿಲ್ಲ. ವೃದ್ಧರು ಹಾಗೂ ಮಕ್ಕಳು ರಸ್ತೆ ದಾಟಲು ಸಾಧ್ಯವಾಗದಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದರು.
‘ಬಿಬಿಎಂಪಿ ಸದಸ್ಯ ಪಿ.ವಿ.ಮಂಜುನಾಥ ಬಾಬು, ಬಿಬಿಎಂಪಿ ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಹೋಗಿದ್ದಾರೆ. ಆದರೆ ಸಂಜೆಯಾದರೂ ಯಾವುದೇ ತಾತ್ಕಾಲಿಕ ಕಾಮಗಾರಿ ಸಹ ಕೈಗೊಂಡಿಲ್ಲ. ಮತ್ತೆ ಮಳೆ ಬಂದರೆ ರಸ್ತೆಯು ಮತ್ತಷ್ಟು ಕುಸಿಯುವ ಅಪಾಯ ಎದುರಾಗಿದೆ’ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.