ಬೆಂಗಳೂರು: ನಗರದ ವಿಜ್ಞಾನ ನಗರ ವಾರ್ಡ್ನಲ್ಲಿ ಗುರುವಾರ (ಫೆ.23) ಬೆಳಿಗ್ಗೆ 10ರಿಂದ ಮಧ್ಯಾಹ್ನ ಒಂದು ಗಂಟೆಯ ವರೆಗೆ `ಮಕ್ಕಳ ವಾರ್ಡ್ ಸಭೆ~ ಏರ್ಪಡಿಸಲಾಗಿದ್ದು ಸುಮಾರು ಏಳುನೂರು ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ.
`ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಹೇಳಲು ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು ಎಂಬುದು ಈ ಒಡಂಬಡಿಕೆಯ ಉದ್ದೇಶ. ಅದರಂತೆ ಬಿಬಿಎಂಪಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಜ್ಞಾನನಗರ ವಾರ್ಡ್ನಲ್ಲಿ ಸಭೆ ಏರ್ಪಡಿಸಲಾಗಿದೆ~ ಎಂದು ಪಾಲಿಕೆ ಸದಸ್ಯರಾದ ಗೀತಾ ವಿವೇಕಾನಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
`ವಾರ್ಡ್ ವ್ಯಾಪ್ತಿಯಲ್ಲಿ ಕೆಲ ಮಕ್ಕಳ ಸಂಘಟನೆಗಳ ಸದಸ್ಯರು ಸಂಚರಿಸಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆ, ಅವರಿಗೆ ಏನು ಸೌಲಭ್ಯ ಒದಗಿಸಬೇಕಾಗಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಹಿರಿಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಪ್ರಶ್ನೆ ಕೇಳಲಿದ್ದಾರೆ. ಶಾಲೆಗೆ ಹೋಗುವ ಮತ್ತು ಹೋಗದ ಮಕ್ಕಳು ಭಾಗವಹಿಸಲಿದ್ದಾರೆ. ಸಂಸದ ಡಿ.ಬಿ. ಚಂದ್ರೇಗೌಡ, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ನಂದೀಶ್ ರೆಡ್ಡಿ, ಮೇಯರ್ ಶಾರದಮ್ಮ ಮತ್ತಿತರರು ಭಾಗವಹಿಸುವ ನಿರೀಕ್ಷೆ ಇದೆ~ ಎಂದು ಅವರು ಹೇಳಿದ್ದಾರೆ.
`ನನ್ನ ವಾರ್ಡ್ ವ್ಯಾಪ್ತಿಯಲ್ಲಿರುವ ಮಕ್ಕಳ ಸಮಸ್ಯೆಗಳನ್ನು ತಿಳಿಯಲು ಇದೊಂದು ಒಳ್ಳೆಯ ಅವಕಾಶ. ಮಕ್ಕಳಿಗೂ ಸ್ಥಳೀಯ ಸಂಸ್ಥೆಗಳ ಕಾರ್ಯ, ಅದರ ವ್ಯಾಪ್ತಿ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು ವೇದಿಕೆ ಸಿಗಲಿದೆ. ಮಕ್ಕಳು ಸಮಾನತೆಯಿಂದ ಬಾಳುವಂತೆ ಮಾಡುವುದು ಸಭೆಯ ಉದ್ದೇಶ~ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.