ಬೆಂಗಳೂರು: ನಲ್ಲಿಯಲ್ಲಿ ನೀರು ಹಿಡಿದುಕೊಳ್ಳುವ ವಿಷಯವಾಗಿ ನೆರೆಹೊರೆಯವರೊಂದಿಗೆ ಜಗಳವಾಗಿದ್ದರಿಂದ ಬೇಸರಗೊಂಡ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೊಂಡನಹಳ್ಳಿ ಸಮೀಪದ ಎ.ಕೆ.ಕಾಲೊನಿಯಲ್ಲಿ ಸೋಮವಾರ ನಡೆದಿದೆ.
ಎ.ಕೆ.ಕಾಲೊನಿ ನಿವಾಸಿ ಸುಬ್ರಮಣಿ ಎಂಬುವರ ಪತ್ನಿ ಸುನಿತಾ (38) ಆತ್ಮಹತ್ಯೆ ಮಾಡಿಕೊಂಡವರು.
ಬೀದಿ ನಲ್ಲಿಯಲ್ಲಿ ನೀರು ಹಿಡಿದುಕೊಳ್ಳುವ ವಿಷಯವಾಗಿ ಸುನಿತಾ ಮತ್ತು ಅವರ ಅಕ್ಕಪಕ್ಕದ ಮನೆಯವರ ನಡುವೆ ರಾತ್ರಿ ವಾಗ್ವಾದ ನಡೆದು ಜಗಳವಾಗಿದೆ. ಈ ವೇಳೆ ನೆರೆಹೊರೆಯವರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇದರಿಂದ ಬೇಸರಗೊಂಡ ಅವರು ಮನೆಗೆ ಬಂದು ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸಂದರ್ಭದಲ್ಲಿ ಸುನಿತಾ ಅವರ ಪತಿ ಮತ್ತು ಮಕ್ಕಳು ಮನೆಯಲ್ಲಿ ಇರಲಿಲ್ಲ. ಘಟನೆ ಸಂಬಂಧ ಹಲ್ಲೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಕ್ಕಪಕ್ಕದ ಮನೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಡುಗೊಂಡನಹಳ್ಳಿ ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.