ADVERTISEMENT

ನೆಲ, ಜಲ ಕಲುಷಿತ ತಡೆಯಲು ಕರೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 19:10 IST
Last Updated 1 ಜೂನ್ 2011, 19:10 IST

ನೆಲಮಂಗಲ: `ನಗರೀಕರಣ, ಕೈಗಾರಿಕೆಯ ತ್ಯಾಜ್ಯದ ಅಸಮರ್ಪಕ ನಿರ್ವಹಣೆ, ಸ್ವಾರ್ಥ ಸಾಧನೆ, ದುರಾಸೆಗಳಿಂದ ನೆಲ ಜಲ ಕಲುಷಿತಗೊಂಡು ಪರಿಸರ ಮಾಲಿನ್ಯವಾಗಿದೆ. ಅವುಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ಪ್ರತಿಯೊಬ್ಬರ ನೈತಿಕ ಹೊಣೆ~ ಎಂದು ಮೇಲಣ ಗವಿಮಠದ ಶ್ರೀ ಮಲಯ ಶಾಂತಮುುನಿ ಸ್ವಾಮೀಜಿ ತಿಳಿಸಿದರು.

ಕುಮುದ್ವತಿ ಪುನಶ್ಚೇತನ ಸಮಿತಿಯು ತಾಲ್ಲೂಕಿನ ಶಿವಗಂಗೆಯ ಕರಿಆನೆ ಮಠದ ಅಂಗಳದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಸಮಿತಿಯ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಶಿವಗಂಗೆಯು ಪುಣ್ಯತೀರ್ಥಗಳ ಕ್ಷೇತ್ರವಾಗಿದ್ದು ಕುಮುದ್ವತಿಯ ನದಿಯ ಉಗಮ ಸ್ಥಾನವಾಗಿದೆ. ಕೆರೆ ಕಾಲುವೆಗಳ ಒತ್ತುವರಿಯಿಂದ ನದಿ ತನ್ನ ನೆಲೆ ಕಳೆದುಕೊಳ್ಳುತ್ತಿದೆ. ನದಿ ಪ್ರಾಂತ್ಯದಲ್ಲಿನ ಅಕ್ರಮ ಚಟುವಟಿಕೆಗಳನ್ನು ತಪ್ಪಿಸಿ ನದಿಗೆ ಜೀವ ತುಂಬಬೇಕು, ಈ ಕಾರ್ಯಕ್ಕಾಗಿ ಎಲ್ಲರೂ ಒಂದಾಗಿ ಹೋರಾಡಬೇಕಾಗಿದೆ~ ಎಂದು ಅವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹೊನ್ನಮ್ಮ ಗವಿಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, `ನದಿ ಕೆರೆ ಕಾಲುವೆಗಳನ್ನು ರಕ್ಷಣೆ ಮಾಡಬೇಕಾದದ್ದು  ಅನಿವಾರ್ಯವಾಗಿದೆ. ಸಮಿತಿಯ ಜನಪರ ಕಾರ್ಯವನ್ನು ಬೆಂಬಲಿಸಬೇಕು~ ಎಂದು ತಿಳಿಸಿದರು. ಸಮಿತಿಯ ಅಧ್ಯಕ್ಷ ಬಾಳೇಕಾಯಿ ನಾಗರಾಜು ಮಾತನಾಡಿ ಸರ್ಕಾರ ಪುನಶ್ಚೇತನಕ್ಕೆ ಮೀಸಲಿಟ್ಟ ಹಣ ಸದ್ವನಿಯೋಗವಾಗುವಂತೆ ನೋಡಿಕೊಳ್ಳಲು ಕಾವಲು ಸಮಿತಿ ರಚಿಸಬೇಕು ಎಂದರು.

ಸಮಿತಿ ಸಂಚಾಲಕ ದೊಡ್ಡಿ ಶಿವರಾಂ, `ಪರಿಸರದ ಕಳಕಳಿಯುಳ್ಳವರನ್ನು ಒಗ್ಗೂಡಿಸಿ ಮಾಲಿನ್ಯದ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಡ ಹಾಕುವುದು ಜನರಲ್ಲಿ ಜಾಗೃತಿ ಮೂಡಿಸುವುದು. 2003ರ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಒತ್ತಾಯಿಸುವುದು ನಮ್ಮ ಉದ್ದೇಶ~ ಎಂದು ವಿವರಿಸಿದರು.

ಡಾ.ಎಲೆ.ನಿಂಗರಾಜು ನದಿ ಪುನಶ್ಚೇತನದ ಮಾಹಿತಿ ನೀಡಿದರು. ಬಿ.ಜೆ.ಪಿ ಮುಖಂಡ ರಾಮಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ರುದ್ರೇಶ್, ಬೂದಿಹಾಲ್ ಕಿಟ್ಟಿ, ಹಂಸರಾಜ್, ಮಲ್ಲಿಕಾರ್ಜುನ್ ಮತ್ತಿತರು ಉಪಸ್ಥಿತರಿದ್ದರು. ಶಿವರಾಂ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಗೌರವಾಧ್ಯಕ್ಷ ಜಯರಾಂ ಸ್ವಾಗತಿಸಿದರು.ಜಂಟಿ ಕಾರ್ಯದರ್ಶಿ ರಾಮು ಜೋಗಿಹಳ್ಳಿ ವಂದಿಸಿದರು.ವಿವಿಧ ಕಲಾವಿದರು ಪರಿಸರ ಗೀತೆ ಹಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.