ADVERTISEMENT

ನೆಲ ದನಿ ಬಾನುಲಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ನೆಲಮಂಗಲ: ಗ್ರಾಮೀಣ ಜನರ ಕಲೆ, ಕೃಷಿ, ಸಾಂಸ್ಕೃತಿಕ ಚಟುವಟಿಕೆ, ಸಂಸ್ಕೃತಿ ಬಿಂಬಿಸುವಲ್ಲಿ ಬಾನುಲಿ ಕೇಂದ್ರಗಳು ಮಹತ್ವಪೂರ್ಣ ಪಾತ್ರ ವಹಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.

ದಿವ್ಯಜ್ಯೋತಿ ವಿದ್ಯಾ ಕೇಂದ್ರದ ತಾಲ್ಲೂಕು ವ್ಯಾಪ್ತಿಯ `ನೆಲ ದನಿ~ ಬಾನುಲಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಕೃಷಿಕರೊಂದಿಗೆ ಜಾನಪದ ಕಲೆ ಹಾಸುಹೊಕ್ಕಾಗಿದೆ. ರೈತರ ಅಭಿವೃದ್ಧಿಯ ಪೂರಕ ಕಾರ್ಯಕ್ರಮಗಳಿಗೆ `ನೆಲ ದನಿ~ ದನಿಯಾಗಲಿ~ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರೊ. ದೊಡ್ಡರಂಗೇಗೌಡ, `ಮನುಕುಲದ ಉಳಿವಿಗಾಗಿ ಹಿರಿಯರು ಹಾಕಿಕೊಟ್ಟ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಿದೆ. ವಿಜ್ಞಾನ ಎಲ್ಲ ಸಮುದಾಯವನ್ನು ಆವರಿಸಿಕೊಂಡಿದ್ದರೂ ಯುವಜನತೆ ದಾರಿ ತಪ್ಪುತ್ತಿದ್ದಾರೆ~ ಎಂದು ವಿಷಾದಿಸಿದರು.

ಕೃಷಿ ಆಯುಕ್ತ ಡಾ. ಬಾಬುರಾವ್ ಮುಡಬಿ ಮಾತನಾಡಿ, `ನೆಲ ದನಿ~ ಬಾನುಲಿ ಕೇಂದ್ರ ಕೃಷಿಗೆ ಹೆಚ್ಚು ಮಹತ್ವ ನೀಡಿರುವುದು ಪ್ರಶಂಸನೀಯ ಎಂದರು. `ನೆಲ ದನಿ~ಯ ಸಂಸ್ಥಾಪಕ ಎಲ್.ಕೃಷ್ಣಮೂರ್ತಿ, ಸಮೂಹ ಮಾಧ್ಯಮ ತಜ್ಞ ಎಂ.ಅಬ್ದುಲ್ ರೆಹಮಾನ್ ಪಾಷ, ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್‌ನ ಜನರಲ್ ಮ್ಯಾನೇಜರ್ ಆರ್.ನರಸಿಂಹಸ್ವಾಮಿ, ಕೃಷಿ ವಿ.ವಿಯ ನಿವೃತ್ತ ಪ್ರಾಧ್ಯಾಪಕ ಬಿ.ಪಿ.ಶಶಿಕಾಂತ್ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಎಂ.ವಿ.ನಾಗರಾಜು, ಮಾಜಿ ಸಚಿವ ಅಂಜನಮೂರ್ತಿ, ವಾರ್ತಾ ಇಲಾಖೆಯ ನಿರ್ದೇಶಕ ಡಾ. ಮುದ್ದುಮೋಹನ್, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಎಚ್.ಅನಿಲ್ ಕುಮಾರ್ ಉಪಸ್ಥಿತರಿದ್ದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT