ಬೆಂಗಳೂರು: ಕೆಂಗೇರಿ–ನಾಯಂಡಹಳ್ಳಿ ಮಾರ್ಗದಲ್ಲಿ ಸೋಮವಾರ ಮಧ್ಯಾಹ್ನ ‘ಟಿಪ್ಪು ಎಕ್ಸ್ಪ್ರೆಸ್’ ರೈಲಿಗೆ ಸಿಲುಕಿ ಶ್ವೇತಾ (29) ಎಂಬುವರು ಮೃತಪಟ್ಟು, ಅವರ ಪತಿ ಮಂಜುನಾಥ್ (32) ಗಂಭೀರವಾಗಿ ಗಾಯಗೊಂಡಿದ್ದಾರೆ.
ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದರೋ ಅಥವಾ ಹಳಿ ದಾಟುವ ಧಾವಂತದಲ್ಲಿ ಈ ಅವಘಡ ಸಂಭವಿಸಿತೋ ಎಂಬುದು ಇನ್ನೂ ಗೊತ್ತಾಗಿಲ್ಲ. ಮಂಜುನಾಥ್ ಅವರ ಕೈ ತುಂಡಾಗಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಮಧ್ಯಾಹ್ನ 3.30ರ ಸುಮಾರಿಗೆ ಶ್ವೇತಾ ಮೊದಲು ಹಳಿ ಮೇಲೆ ಹೋಗಿದ್ದರು. ರೈಲು ವೇಗವಾಗಿ ಬರುತ್ತಿರುವುದನ್ನು ಕಂಡ ಮಂಜುನಾಥ್, ಪತ್ನಿಯನ್ನು ರಕ್ಷಿಸಲು ಮುಂದಾದರು. ಆದರೆ, ಪ್ರಾಣ ಉಳಿಸಿಕೊಳ್ಳುವ ಯತ್ನದಲ್ಲಿ ಇಬ್ಬರೂ ಕೆಳಗೆ ಬಿದ್ದರು. ರೈಲು ಹರಿದು ಹೋಗಿದ್ದರಿಂದ ಶ್ವೇತಾ ಅವರ ಎರಡೂ ಕಾಲುಗಳು ಹಾಗೂ ಮಂಜುನಾಥ್ ಅವರ ಎಡಗೈ ತುಂಡಾಯಿತು.
ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಶ್ವೇತಾ ಕೊನೆಯುಸಿರೆಳೆದರು. ತಲೆಗೆ ಪೆಟ್ಟು ಬಿದ್ದಿದ್ದರಿಂದ ಮಂಜುನಾಥ್ ಅವರಿಗೆ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಕೊಡಿಸಿ, ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿರುವ ಮಂಜುನಾಥ್, ಪತ್ನಿ ಹಾಗೂ ಮೂರು ವರ್ಷದ ಮಗುವಿನ ಜತೆ ಕುಂಬಳಗೋಡು ಸಮೀಪದ ಚಳ್ಳಘಟ್ಟದಲ್ಲಿ ನೆಲೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.