ADVERTISEMENT

ಪರಾರಿಗೆ ಯತ್ನ: ಕಳ್ಳ ಸಾವು

​ಪ್ರಜಾವಾಣಿ ವಾರ್ತೆ
Published 30 ಮೇ 2012, 18:45 IST
Last Updated 30 ಮೇ 2012, 18:45 IST

ಬೆಂಗಳೂರು: ಕಳ್ಳನೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುವ ಯತ್ನದಲ್ಲಿ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಆಡುಗೋಡಿ ಸಮೀಪದ ಅಂಬೇಡ್ಕರ್ ಕಾಲೊನಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಆಡುಗೋಡಿ ಕೊಳೆಗೇರಿಯ ವೇಲು (23) ಎಂಬಾತ ಮೃತಪಟ್ಟಿದ್ದು, ಆತನ ಸಹಚರ ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ. ಆತನ ಮತ್ತೊಬ್ಬ ಸಹಚರ ಚಿಟ್ಟಿ ಎಂಬಾತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಮೂರು ಮಂದಿ ರಾತ್ರಿ ಪಾನಮತ್ತರಾಗಿ ಅಂಬೇಡ್ಕರ್ ಕಾಲೊನಿಯ ಮನೆಯೊಂದರಲ್ಲಿ ಕಳವು ಮಾಡಲು ಹೊಂಚು ಹಾಕುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪೊಲೀಸರನ್ನು ನೋಡಿ ಗಾಬರಿಯಾದ ಅವರು ಮನೆಯೊಂದರ ಮೇಲೆ ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಪೊಲೀಸರು ಅವರನ್ನು ಬೆನ್ನತ್ತಿದಾಗ, ಪಕ್ಕದ ಮನೆಯ ಮಹಡಿಗೆ ಜಿಗಿದು ಪರಾರಿಯಾಗಲು ಯತ್ನಿಸಿದರು. ಈ ಹಂತದಲ್ಲಿ ಮನೆಯ ಮಹಡಿಯಿಂದ ಕೆಳಗೆ ಬಿದ್ದ ವೇಲು ತಲೆಗೆ ತೀವ್ರ ಪೆಟ್ಟಾಯಿತು. ಆತನನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಬುಧವಾರ ನಸುಕಿನಲ್ಲಿ ಆತ ಮೃತಪಟ್ಟ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ವೇಲು ವಿರುದ್ಧ ಆಡುಗೋಡಿ ಠಾಣೆಯಲ್ಲಿ ಕಳವು, ದರೋಡೆ ಮತ್ತಿತರ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಆತ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿವೇಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.