ADVERTISEMENT

ಪೊಲೀಸರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 20:04 IST
Last Updated 20 ಏಪ್ರಿಲ್ 2013, 20:04 IST

ಬೆಂಗಳೂರು: ಸಿದ್ಧಉಡುಪು ಕಾರ್ಖಾನೆ ಮಾಲೀಕ ಚಂದ್ರಶೇಖರ್ ಸಾವಿನ ಬಗ್ಗೆ  ಪುಲಿ ಕೇಶಿನಗರ ಠಾಣೆ ಎಸ್‌ಐ, ಇಬ್ಬರು ಕಾನ್‌ಸ್ಟೆಬಲ್‌ಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

`ವಂಚನೆ ಸಂಬಂಧ ಚಂದ್ರಶೇಖರ್ ಅವರನ್ನು ವಿಚಾರಣೆ ನಡೆಸುತ್ತಿದ್ದ ಪುಲಿಕೇಶಿನಗರ ಠಾಣೆಯ ಎಸ್‌ಐ ದಯಾನಂದ, ಕಾನ್‌ಸ್ಟೆಬಲ್‌ಗಳಾದ ಸುನೀಲ್ ಮತ್ತು ಸನಾವುಲ್ಲಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ ಸಿಬ್ಬಂದಿ ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ' ಎಂದು ಪೊಲೀಸರು ಹೇಳಿದ್ದಾರೆ.

`ಕಟ್ಟಡದಿಂದ ಕೆಳಗೆ ಬೀಳುವ ಮುನ್ನ ಚಂದ್ರಶೇಖರ್, ವಿಜಯ್ ಟ್ರೇಡರ್ಸ್‌ನ ಮಾಲೀಕ ವಿಜಯ್‌ಕುಮಾರ್ ಮತ್ತು ಅವರ ಸಹಚರರ ಜತೆ ಮಾತಿನ ಚಕಮಕಿ ನಡೆಸಿದ್ದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿ ಅವರನ್ನು ಸಮಾಧಾನಪಡಿಸಿದ್ದರು. ಬಳಿಕ ಸ್ವಲ್ಪ ಸಮಯದಲ್ಲೇ ಚಂದ್ರಶೇಖರ್ ಕೆಳಗೆ ಬಿದ್ದು ಸಾವನ್ನಪ್ಪಿದ್ದರು.

ಪೊಲೀಸ್ ವಿಚಾರಣೆ ವೇಳೆ ಈ ಘಟನೆ ನಡೆದಿರುವುದರಿಂದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ' ಅವರನ್ನು ಸೇವೆಯಿಂದ ಅಮಾನತು ಮಾಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು

ಘಟನೆ ವೇಳೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರಿಂದ ಮೂವರೂ ಸಿಬ್ಬಂದಿ ಗಾಯಗೊಂಡಿದ್ದಾರೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದ ಬಳಿಕ ಕ್ರಮ ಜರುಗಿಸಲಾಗುವುದು' ಎಂದು ಮಾಹಿತಿ ನೀಡಿದರು.

`ಚಂದ್ರಶೇಖರ್, ವಿಜಯ್‌ಕುಮಾರ್ ಅವರಿಂದ 13 ಲಕ್ಷ ರೂಪಾಯಿ ಮೌಲ್ಯದ ಯಂತ್ರಗಳನ್ನು ಖರೀದಿಸಿದ್ದರು. ಆ ಹಣವನ್ನು ಹಿಂದಿರುಗಿಸದ ಕಾರಣ ವಿಜಯ್‌ಕುಮಾರ್, ಪುಲಿಕೇಶಿನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಲು ಪೊಲೀಸರು ಶುಕ್ರವಾರ ಸಂಜೆ ವೃಷಭಾವತಿನಗರದಲ್ಲಿರುವ ಚಂದ್ರಶೇಖರ್ ಅವರ ಕಾರ್ಖಾನೆ ಬಳಿ ಹೋಗಿದ್ದರು. ಕಟ್ಟಡದ 4ನೇ ಮಹಡಿಯಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಚಂದ್ರಶೇಖರ್ ಕೆಳಗೆ ಬಿದ್ದು ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT