ADVERTISEMENT

ಪ್ರವಾಸಿ ತಾಣಗಳ ಅಭಿವೃದ್ಧಿಗೆ ದೇರೇವಾಲಾ ಕಂಪೆನಿ ನೆರವು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:07 IST
Last Updated 20 ಡಿಸೆಂಬರ್ 2013, 20:07 IST

ಬೆಂಗಳೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಜೈಪುರದ ‘ದೇರೇವಾಲಾ ಜ್ಯುವೆಲ್ಲರಿ ಇಂಡಸ್ಟ್ರೀಸ್‌’ ಕಂಪೆನಿಯು ತನ್ನ ‘ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ’ ನಿಧಿಯಿಂದ ನೆರವು ನೀಡಲಿದೆ.

ಈ ಸಂಬಂಧ ಪರಸ್ಪರ ಒಡಂಬಡಿಕೆ ಪತ್ರಕ್ಕೆ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅರವಿಂದ ಜಾಧವ್‌ ಮತ್ತು ಕಂಪೆನಿಯ ಅಧ್ಯಕ್ಷ ಪ್ರಮೋದ್‌ ಅಗರ್‌ವಾಲ್‌ ಇತ್ತೀಚೆಗೆ ಸಹಿ ಹಾಕಿದರು.

‘ಎರಡು ವರ್ಷಗಳ ಅವಧಿಗೆ ಮಾಡಿಕೊಂಡಿರುವ ಈ ಒಡಂಬಡಿಕೆ­ಯನ್ನು ಮಾಡಿಕೊಳ್ಳ­ಲಾಗಿದೆ. ಇದರ ಯಶಸ್ಸು ನೋಡಿ­ಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

‘ಒಡಂಬಡಿಕೆಯ ಭಾಗವಾಗಿ  ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲುಗಳು, ಪ್ರವಾಸೋದ್ಯಮ ಇಲಾಖೆಯ ವಿಲಾಸಿ ಪ್ರವಾಸಿ ರಥವಾದ ‘ಗೋಲ್ಡನ್‌ ಚಾರಿಯಟ್‌’ ಮತ್ತು ‘ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್‌’ಗಳಲ್ಲಿ ಇನ್ನು ಮುಂದೆ   ಕಂಪೆನಿಯ ಆಭರಣ ಮಾರಾಟ ಮಳಿಗೆಗಳು ಕಾರ್ಯಾರಂಭ ಮಾಡಲಿವೆ’ ಎಂದು ಜಾಧವ್‌ ತಿಳಿಸಿದರು.

‘ಇಲಾಖೆಯು ಮಳಿಗೆಗಳಿಗಾಗಿ ಸ್ಥಳಾವಕಾಶವನ್ನು ಒದಗಿಸಲಿದೆ. ಆದರೆ ಇದಕ್ಕಾಗಿ ಬಾಡಿಗೆ ಪಡೆಯುವುದಿಲ್ಲ. ಬದಲಿಗೆ ಮಳಿಗೆಗಳು ಗಳಿಸುವ ಆದಾಯದಲ್ಲಿ ಒಂದು ಭಾಗವನ್ನು ಕಂಪೆನಿಯು ಇಲಾಖೆಗೆ ನೀಡಲಿದೆ. ಜತೆಗೆ ನಾಡಿನ ಪ್ರವಾಸಿ ತಾಣಗಳ ಬಗ್ಗೆ ಪರಿಚಯ ಪುಸ್ತಕಗಳನ್ನು ಹೊರ ತರಲಿದೆ. ಜಪಾನ್‌, ಅಮೆರಿಕ, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಇರುವ ಮಳಿಗೆಗಳಲ್ಲಿ ರಾಜ್ಯದ ಪ್ರವಾಸೋದ್ಯಮದ ಪ್ರಚಾರಕ್ಕೆ  ಕಂಪೆನಿಯು ಅವಕಾಶ ಮಾಡಿಕೊಡಲಿದೆ’ ಎಂದು ಅವರು ವಿವರಿಸಿದರು.

‘ಪ್ರವಾಸೋದ್ಯಮವು ಬೇರಾವುದೇ ಉದ್ಯಮಗಳಿಗಿಂತ ಹೆಚ್ಚು ಲಾಭ ತರುವ ಕ್ಷೇತ್ರವಾಗಿದೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸುವ ಉದ್ಯಮ ಇದಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಡಿ.ದ್ಯಾವಯ್ಯ, ‘ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇಂತಹ ಒಡಂಬಡಿಕೆ ಮೊಟ್ಟ ಮೊದಲನೆಯದಾಗಿದೆ’ ಎಂದರು.

ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಜಿ.ಸತ್ಯವತಿ, ಕಂಪೆನಿಯ ಮಾರಾಟ ವಿಭಾಗದ ಮುಖ್ಯಸ್ಥ ಸಂಜಯ್‌ ಕಪೂರ್‌ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.