ADVERTISEMENT

ಬಿಬಿಎಂಪಿ ಅಕ್ರಮ: ಎಂಜಿನಿಯರ್ ಬಂಧನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:55 IST
Last Updated 25 ಫೆಬ್ರುವರಿ 2012, 19:55 IST

ಬೆಂಗಳೂರು: ಬಿಬಿಎಂಪಿಯ ಮೂರು ವಲಯ ವ್ಯಾಪ್ತಿಯ ಕಾಮಗಾರಿಗಳಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಹಗರಣದ ಸಂಬಂಧ ಸಿಐಡಿ ಪೊಲೀಸರು ಅಥಣಿ ಪುರಸಭೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ (ಎಇಇ) ಕನಕದಾಸ್‌ನನ್ನು  ಬಂಧಿಸಿದ್ದಾರೆ.

ಕನಕದಾಸ್ ಅವರು ಈ ಹಿಂದೆ ಬಿಬಿಎಂಪಿಯ ರಾಜರಾಜೇಶ್ವರಿನಗರ ವಲಯದಲ್ಲಿ ಎಇಇ ಆಗಿದ್ದಾಗ ಪಾಲಿಕೆಯ ಹಗರಣದಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಚಿತ್ರದುರ್ಗದ ಬಳಿ ಬಂಧಿಸಲಾಯಿತು. ನಂತರ ನಗರದ ನಾಲ್ಕನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಧೀಶರು ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದರು. ಅಲ್ಲದೇ ಅವರನ್ನು ಮಾ.9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು ಎಂದು ಸಿಐಡಿ ಪೊಲೀಸರು ತಿಳಿಸಿದರು.

ಆತ್ಮಹತ್ಯೆ :ಚಿನ್ನಾಭರಣ ವ್ಯಾಪಾರದಲ್ಲಾದ ನಷ್ಟದಿಂದ ಮನನೊಂದು ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಕಾರ್ಪೊರೇಷನ್ ಕಾಲೋನಿ ನಿವಾಸಿ ಕಮಲೇಶ್(22) ಮೃತಪಟ್ಟವರು. ಇವರು ತನ್ನ ಸ್ನೇಹಿತ ಸತೀಶ್‌ಕುಮಾರ್ ಎಂಬುವವರೊಂದಿಗೆ ಪಾಲುದಾರರಾಗಿ ಚಿನ್ನಾಭರಣ ವ್ಯಾಪಾರ ಮಾಡುತಿದ್ದರು. ಇದರಿಂದ 14 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದರು. ಮಧ್ಯಾಹ್ನ 3.30ರ ಸುಮಾರಿಗೆ ಮನೆಗೆ ಬಂದ ಅವರು ನೇಣು ಹಾಕಿಕೊಂಡಿದ್ದಾರೆ. ಸಂಜೆ ಅವರ ತಂದೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಲಕ್ ನಗರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.