ADVERTISEMENT

ಬೆಂಗಳೂರು ಗ್ರಾಮಾಂತರ ಜಿ.ಪಂ.ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೆದಿರುವ ಕುಡಿಯುವ ನೀರಿನ ಕೊಳವೆಬಾವಿಗಳಿಗೂ ಪಂಪ್‌ಸೆಟ್ ಅಳವಡಿಸಲು ಹಣಕಾಸಿನ ಕೊರತೆ ಎದುರಾಗಿದೆ.
ಇದರಿಂದ ಜಿಲ್ಲೆಯ ವಿವಿಧೆಡೆ ಕೊರೆದಿರುವ 42 ಕೊಳವೆಬಾವಿಗಳಿಗೆ ಪಂಪ್‌ಸೆಟ್ ಅಳವಡಿಸಲು ಸಾಧ್ಯವಾಗದೆ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ಮಂಗಳವಾರ ನಡೆದ ಬೆಂಗಳೂರು ಗ್ರಾಮಾಂತರ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ರಾಜ್ಯ ಸರ್ಕಾರ 2012-13ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ ನಂತರವಷ್ಟೇ ಕೊಳವೆ ಬಾವಿಗಳಿಗೆ ಹೊಸ ಪಂಪ್‌ಸೆಟ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂದು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ್ ಸಭೆಗೆ ತಿಳಿಸಿದರು.

`ಜಿಲ್ಲೆಯಲ್ಲಿ ಈ ವರ್ಷ 164 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಈ ಪೈಕಿ 97ರಲ್ಲಿ ನೀರು ಸಿಕ್ಕರೆ, 67 ವಿಫಲವಾಗಿವೆ. ನೀರು ಸಿಕ್ಕಂತಹ 39 ಕೊಳವೆಬಾವಿಗಳಿಗೆ ಪಂಪ್‌ಸೆಟ್‌ಗಳನ್ನು ಅಳವಡಿಸಿ ಜನರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ, ಇನ್ನುಳಿದ 42 ಕೊಳವೆಬಾವಿಗಳಿಗೆ ಪಂಪ್‌ಸೆಟ್‌ಗಳನ್ನು ಅಳವಡಿಸಲು ಹಣ ಇಲ್ಲ~ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

 ಕಾರ್ಯನಿರ್ವಾಹಕ ಎಂಜಿನಿಯರ್ ಉತ್ತರದಿಂದ ಅತೃಪ್ತರಾದ ಸದಸ್ಯರು, `ಈಗಾಗಲೇ ಕುಡಿಯುವ ನೀರಿಲ್ಲದೆ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಈಗಾಗಲೇ ಕೊರೆದಿರುವ ಕೊಳವೆಬಾವಿಗಳಿಗೂ ಪಂಪ್‌ಸೆಟ್ ಅಳವಡಿಸದಿದ್ದರೆ ಹೇಗೆ? ಜನ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕೂಡಲೇ ಸರ್ಕಾರದ ಮೇಲೆ ಒತ್ತಡ ತಂದು ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಿರಿ~ ಎಂದು ಒತ್ತಾಯಿಸಿದರು.

`ಬಹುಶಃ ಇನ್ನು 15 ದಿನಗಳೊಳಗೆ ಸರ್ಕಾರ ಕ್ರಿಯಾ ಯೋಜನೆಗೆ ಅನುಮೋದನೆ ನೀಡಬಹುದು. ಆನಂತರ ಹೊಸ ಪಂಪ್‌ಸೆಟ್‌ಗಳನ್ನು ಖರೀದಿಸಿ 42 ಕೊಳವೆಬಾವಿಗಳಿಗೆ ಅಳವಡಿಸಲಾಗುವುದು~ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಸಭೆಗೆ ತಿಳಿಸಿದರು.

ಗಂಗಾ ಕಲ್ಯಾಣ ಯೋಜನೆಯೂ ಸ್ಥಗಿತ:
ಇನ್ನು, ಜಿಲ್ಲೆಯಲ್ಲಿ ಎರಡು ವರ್ಷಗಳಿಂದ `ಗಂಗಾ ಕಲ್ಯಾಣ~ ಯೋಜನೆಯಡಿ ಕೊಳವೆಬಾವಿಗಳನ್ನು ಕೂಡ ಕೊರೆಯಲು ಸಾಧ್ಯವಾಗುತ್ತಿಲ್ಲ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಸಭೆಗೆ ತಿಳಿಸಿದರು.

ಸುಮಾರು 1200 ಅಡಿ ಆಳ ಕೊಳವೆಬಾವಿಗಳನ್ನು ಕೊರೆಯಬೇಕಾಗಿರುವುದರಿಂದ ಹಾಗೂ ನೀರು ಸಿಗದೆ ವಿಫಲವಾದಂತಹ ಕೊಳವೆಬಾವಿಗಳಿಗೆ ಸರ್ಕಾರ ಸಹಾಯಧನ ನೀಡದೆ ಇರುವುದರಿಂದ ಗುತ್ತಿಗೆದಾರರು ಕೊಳವೆಬಾವಿ ಕೊರೆಯಲು ಮುಂದೆ ಬರುತ್ತಿಲ್ಲ. ಈ ವರ್ಷ ಕೆಲವು ಗುತ್ತಿಗೆದಾರರು ಕೊಳವೆಬಾವಿ ಕೊರೆಯಲು ಮುಂದೆ ಬಂದಿದ್ದು, ಇದೀಗ ಸರ್ವೆ ಕಾರ್ಯ ಪ್ರಾರಂಭವಾಗಿದೆ. ಪ್ರಕ್ರಿಯೆ ಮುಗಿದ ನಂತರ ಕೊಳವೆಬಾವಿಗಳನ್ನು ಕೊರೆಯಲಾಗುವುದು ಎಂದು ಅವರು ಹೇಳಿದರು.

`ಪ್ರತಿ ವರ್ಷ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸುವುದು ಬೇಡ. ಒಂದು ವೇಳೆ ಯೋಜನೆ ಯಶಸ್ವಿಯಾಗದಿದ್ದರೆ ಗಂಗಾ ಕಲ್ಯಾಣ ಯೋಜನೆಯನ್ನೇ ನಿಲ್ಲಿಸಿ. ಜನರಿಗೆ ಬರೀ ಆಸೆ ತೋರಿಸುವುದು ಬೇಡ~ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಒತ್ತಾಯಿಸಿದರು.

ನೆಲಮಂಗಲ ಆಸ್ಪತ್ರೆ ಅವ್ಯವಸ್ಥೆ ಅನಾವರಣ: ನೆಲಮಂಗಲ ಆಸ್ಪತ್ರೆಯ ಅವ್ಯವಸ್ಥೆ ಕೂಡ ಸಭೆಯಲ್ಲಿ ಅನಾವರಣಗೊಂಡಿತು. `ಪ್ರತಿ ದಿನ ಐದಾರು ಮಂದಿ ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ, ರಾತ್ರಿ ವೇಳೆ ವೈದ್ಯರೇ ಇರುವುದಿಲ್ಲ. ವಿದ್ಯುತ್ ಕೈಕೊಟ್ಟರೆ ಶಸ್ತ್ರ ಚಿಕಿತ್ಸೆ ಮಾಡಲು ಕಷ್ಟವಾಗುತ್ತಿದೆ. ಇನ್ನು, ಅಪಘಾತದಲ್ಲಿ ಸಾವನ್ನಪ್ಪುವ ಅನಾಥ ಶವಗಳನ್ನು ಸಂರಕ್ಷಿಸಲು ಪೆಟ್ಟಿಗೆಗಳಿಲ್ಲ. ಕುಡಿಯುವ ನೀರು ಹಾಗೂ ಸ್ವಚ್ಛತೆ ಬಗ್ಗೆ ಕೇಳುವವರೇ ಇಲ್ಲ~ ಎಂದು ಸದಸ್ಯ ರಾಮು ಆರೋಪಿಸಿದರು.

ಆಸ್ಪತ್ರೆಯಲ್ಲಿ `ಡಿ~ ಗ್ರೂಪ್ ನೌಕರರ ಕೊರತೆ ಎದ್ದು ಕಾಣುತ್ತಿದೆ. ಸಿಬ್ಬಂದಿಯನ್ನು ಒದಗಿಸಿದರೆ ಕನಿಷ್ಠ ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನಾದರೂ ಕಾಪಾಡಬಹುದು ಎಂದು ಮನವಿ ಮಾಡಿದರು.`ನಂದುಗುಡಿ ಆಸ್ಪತ್ರೆಯಲ್ಲಿ ರಕ್ತ ಹಾಗೂ ಕಫ ಪರೀಕ್ಷೆ ಮಾಡುವ ಯಂತ್ರೋಪಕರಣಗಳಿದ್ದರೂ ವೈದ್ಯರು ಖಾಸಗಿ ಆಸ್ಪತ್ರೆಗಳಿಗೆ ತೆರಳಲು ರೋಗಿಗಳಿಗೆ ಚೀಟಿ ಬರೆದುಕೊಡುತ್ತಿದ್ದಾರೆ~ ಎಂದು ನಾರಾಯಣಸ್ವಾಮಿ ಆರೋಪಿಸಿದರು.

ಇದರಿಂದ ಕೆರಳಿದ ಕಾಂಗ್ರೆಸ್‌ನ ಹಿರಿಯ ಸದಸ್ಯ ಕೃಷ್ಣಪ್ಪ, `ಸ್ಥಾಯಿ ಸಮಿತಿ ಅಧ್ಯಕ್ಷರು ಅವ್ಯವಸ್ಥೆ ಸರಿಪಡಿಸುವ ಬದಲು ಆರೋಪ ಮಾಡುವುದು ಸರಿಯಲ್ಲ. ಎಷ್ಟು ಆಸ್ಪತ್ರೆಗಳಿಗೆ ಎಷ್ಟು ಬಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂಬುದರ ಬಗ್ಗೆ ಸಭೆಗೆ ತಿಳಿಸಿ~ ಎಂದು ಸವಾಲು ಹಾಕಿದರು. ಸದಸ್ಯರ ಆರೋಪಕ್ಕೆ ನಾರಾಯಣಸ್ವಾಮಿ ಮುಗುಳ್ನಕ್ಕರೇ ಹೊರತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಅನುಮೋದನೆ: 2012-13ನೇ ಸಾಲಿನಲ್ಲಿ 13ನೇ ಹಣಕಾಸು ಯೋಜನೆಯಡಿ 196.80 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳ ನಿರ್ವಹಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಭೆ ಅನುಮೋದನೆ ನೀಡಿತು.
ಈ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿಗೆ 34.68, ದೊಡ್ಡಬಳ್ಳಾಪುರ ತಾಲ್ಲೂಕಿಗೆ 59.87, ಹೊಸಕೋಟೆ ತಾಲ್ಲೂಕಿಗೆ 61.11, ನೆಲಮಂಗಲ ತಾಲ್ಲೂಕಿಗೆ 41.14 ಲಕ್ಷ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ.

ಬೆಳ್ಳಿ ಹಬ್ಬ ಆಚರಣೆಗೆ ನಿರ್ಧಾರ: ಇನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಅಸ್ತಿತ್ವಕ್ಕೆ ಬಂದು 25 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಈ ವರ್ಷ ಬೆಳ್ಳಿ ಹಬ್ಬ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಶಾಂತಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಹಕ್ಕಿನ ಮೊಟಕು ಬಗ್ಗೆ ಹೋರಾಟ..
ಜಿ.ಪಂ. ಸದಸ್ಯರ ಹಕ್ಕನ್ನು ಸರ್ಕಾರ ಮೊಟಕುಗೊಳಿಸಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಕೃಷ್ಣಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಜೆ. ನರಸಿಂಹಸ್ವಾಮಿ, `ಕ್ರಿಯಾ ಯೋಜನೆಯನ್ನೂ ರೂಪಿಸಲು ಅಧಿಕಾರ ಇಲ್ಲದ ಜಿ.ಪಂ. ಸದಸ್ಯರ ಸ್ಥಿತಿ ರಬ್ಬರ್ ಸ್ಟಾಂಪ್‌ನಂತಾಗಿದೆ.
 
ನಿಮಗೆ ಗೌರವ ಇದ್ದಲ್ಲಿ ರಾಜೀನಾಮೆ ಕೊಡಿ. ಹಕ್ಕಿಗಾಗಿ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೂ ನಿಮ್ಮ ಜತೆ ನಾನಿರುತ್ತೇನೆ~ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.