ಬೆಂಗಳೂರು: ಧರ್ಮ ಪ್ರಚಾರಕ ಬೆನ್ನಿಹಿನ್ಗೆ ನಗರದಲ್ಲಿ ಸಮಾವೇಶ ನಡೆಸಲು ಅವಕಾಶ ನೀಡಬಾರದು ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್ಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮೂಢನಂಬಿಕೆಗಳ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಹೊರಟಿದ್ದ ಸರ್ಕಾರ ಬೆನ್ನಿಹಿನ್ಗೆ ರತ್ನಗಂಬಳಿಯ ಸ್ವಾಗತ ನೀಡಲು ಹೊರಟಿರುವುದು ಸರಿಯಲ್ಲ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಬೆನ್ನಿಹಿನ್ ಜನರಿಗೆ ಮಂಕುಬೂದಿ ಎರಚಿ ಮತಾಂತರ ಕಾರ್ಯದಲ್ಲಿ ತೊಡಗಿದ್ದಾರೆ. ಮತಾಂತರ ಉದ್ದೇಶ ಇಟ್ಟುಕೊಂಡೇ ನಗರದಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ವೋಟ್ಬ್ಯಾಂಕ್ ಉದ್ದೇಶ ಇಟ್ಟು ಕೊಂಡು ಕಾಂಗ್ರೆಸ್ ಪಕ್ಷ ಸಮಾವೇಶಕ್ಕೆ ಅವಕಾಶ ನೀಡಿದೆ ಎಂದರು.
8ರಂದು ಪ್ರತಿಭಟನೆ: ಅಡುಗೆ ಅನಿಲ, ಆಟೊಗ್ಯಾಸ್ ದರ ಏರಿಕೆ ಖಂಡಿಸಿ ಇದೇ 8ರಂದು ಮಂಡಲಮಟ್ಟದಲ್ಲಿ
ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ಜೊಲ್ಲೆ ತಿಳಿಸಿದರು.
‘ಸ್ಪಷ್ಟ ಆದೇಶ ನೀಡಿ’
ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಅಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೂ ಆಧಾರ್ ಸಂಖ್ಯೆ ನೀಡುವಂತೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗ್ರಾಹಕರಿಗೆ ಸೂಚಿಸುತ್ತಿರುವುದು ಸರಿಯಲ್ಲ ಎಂದು ಎಸ್.ಸುರೇಶ್ಕುಮಾರ್ ಟೀಕಿಸಿದರು.
ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ, ರಾಜ್ಯದ ಆಹಾರ ಸಚಿವ ದಿನೇಶ್ ಗುಂಡೂರಾವ್ ಅವರು ‘ಆಧಾರ್ ಕಡ್ಡಾಯ ಅಲ್ಲ ಎಂದು ಹೇಳಿದ್ದಾರೆ. ಇಷ್ಟಾದರೂ ಆಯಿಲ್ ಕಂಪೆನಿಗಳು ಆಧಾರ್ ಸಂಖ್ಯೆ ಕೇಳುತ್ತಿರುವುದು ಖಂಡನಾರ್ಹ. ಸರ್ಕಾರ ಕಠಿಣ ಎಚ್ಚರಿಕೆ ನೀಡಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.