ADVERTISEMENT

ಭಾವೈಕ್ಯ ಮೂಡಿಸಲು ಅರಳಿದ ರಾಷ್ಟ್ರಧ್ವಜ

`ಬೆಂಗಳೂರಲ್ಲಿ ತ್ರಿವರ್ಣಕ್ರಾಂತಿ' ಕಾರ್ಯಕ್ರಮದಡಿ ಅನಾವರಣ

​ಪ್ರಜಾವಾಣಿ ವಾರ್ತೆ
Published 20 ಜನವರಿ 2013, 19:49 IST
Last Updated 20 ಜನವರಿ 2013, 19:49 IST
ಯುವಕರಲ್ಲಿ ರಾಷ್ಟ್ರೀಯತೆ ಮತ್ತು ಭಾವೈಕ್ಯತೆಯ ಅರಿವು ಮೂಡಿಸುವ ಉದ್ದೇಶದಿಂದ ಸಹಕಾರ ನಗರದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ನಗರದ ಜಿಕೆವಿಕೆ ಆವರಣದಲ್ಲಿ ಭಾನುವಾರ 130 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸಿದರು 	-ಪ್ರಜಾವಾಣಿ ಚಿತ್ರ
ಯುವಕರಲ್ಲಿ ರಾಷ್ಟ್ರೀಯತೆ ಮತ್ತು ಭಾವೈಕ್ಯತೆಯ ಅರಿವು ಮೂಡಿಸುವ ಉದ್ದೇಶದಿಂದ ಸಹಕಾರ ನಗರದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ನಗರದ ಜಿಕೆವಿಕೆ ಆವರಣದಲ್ಲಿ ಭಾನುವಾರ 130 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸಿದರು -ಪ್ರಜಾವಾಣಿ ಚಿತ್ರ   

ಯಲಹಂಕ: ವಿಶಾಲವಾದ ಮೈದಾನದ ತುಂಬ ಹೊದಿಸಿದ್ದ ರಾಷ್ಟ್ರಧ್ವಜದ ಮೇಲೆ ಹೂಮಳೆ ಸುರಿಸುತ್ತ ಹೆಲಿಕಾಪ್ಟರ್ ಸಾಗುತ್ತಿದ್ದರೆ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. `ಬೋಲೋ ಭಾರತ್ ಮಾತಾಕಿ ಜೈ' ಎಂಬ ಘೋಷಣೆಗಳನ್ನು ಕೂಗುತ್ತ ದೇಶಭಕ್ತಿ ಮೆರೆಯುತ್ತಿದ್ದ ದೃಶ್ಯ ಎಲ್ಲರಲ್ಲಿಯೂ ರೋಮಾಂಚನ ಮೂಡಿಸಿತು. ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಮೈದಾನ ಇದಕ್ಕೆ ಸಾಕ್ಷಿಯಾಯಿತು.

ವಿಶ್ವದಲ್ಲೇ ಅತಿದೊಡ್ಡದಾದ 300 ಅಡಿ ಉದ್ದ ಮತ್ತು 450 ಅಡಿ ಅಗಲ (1.35 ಲಕ್ಷ ಚದರಡಿ) ವಿಸ್ತೀರ್ಣದ ರಾಷ್ಟ್ರಧ್ವಜವನ್ನು ಭಾನು ವಾರ ಅನಾವರಣಗೊಳಿಸಲಾಯಿತು. ಸಹಕಾರ ನಗರದ ಕಾವೇರಿ ಕಾಲೇಜು ಹಾಗೂ `ಅಮ್ಮಾ ಫೌಂಡೇಷನ್ ಹೆಲ್ಪ್ ಅಂಡ್ ಗ್ರೋ' ಸಂಸ್ಥೆಯ ವತಿಯಿಂದ `ಬೆಂಗಳೂರಿನಲ್ಲಿ ತ್ರಿವರ್ಣಕ್ರಾಂತಿ' ಕಾರ್ಯಕ್ರಮದಡಿ ಯುವಕರಲ್ಲಿ `ಭಾವೈಕ್ಯ ಮತ್ತು ರಾಷ್ಟ್ರೀಯತೆ' ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾಗೃತದಳದ ನಿರ್ದೇಶಕ (ಕರ್ನಾಟಕ ಲೋಕಾಯುಕ್ತ ಪೊಲೀಸ್) ಡಿ.ಎನ್.ಮುನಿಕೃಷ್ಣ, `ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸುವ ಮೂಲಕ ಯುವಕರಲ್ಲಿ ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕು. ದೇಶದ ಏಳಿಗೆಗಾಗಿ ಹೋರಾಡಿ ಮಡಿದ ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಸಿಕೊಂಡು ಪ್ರೀತಿ, ವಿಶ್ವಾಸ, ತ್ಯಾಗ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣಗಳನ್ನು ರೂಢಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ 40 ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ರಾಷ್ಟ್ರಧ್ವಜವನ್ನು ಕಂಡಿರಲಿಲ್ಲ' ಎಂದರು.

ಸಂಸ್ಥೆಯ ಅಧ್ಯಕ್ಷ ವಿ.ಕೆ.ರೋಹಿತ್, ರಾಷ್ಟ್ರಧ್ವಜವನ್ನು ತಯಾರಿಸಲು 20 ಸಾವಿರ ಚದರಡಿ ಬಟ್ಟೆಯನ್ನು ಉಪಯೋಗಿಸಲಾಗಿದ್ದು, 20 ಜನ ಟೈಲರ್‌ಗಳು 6 ತಿಂಗಳ ಕಾಲ ಶ್ರಮಿಸಿದ್ದಾರೆ.  ಧ್ವಜಕ್ಕೆ ಅಂತಿಮ ರೂಪ ಕೊಡುವ ಕಾರ್ಯ ರಾತ್ರಿಯಿಂದ ಬೆಳಿಗ್ಗೆಯವರೆಗೆ ನಡೆಯಿತು' ಎಂದರು.

ಬಿಬಿಎಂಪಿ ಸದಸ್ಯರಾದ ಅಶ್ವತ್ಥನಾರಾಯಣಗೌಡ, ಕೆಂಪೇಗೌಡ, ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಂ.ದೇವರಾಜಪ್ಪ, ಕಾಂಗ್ರೆಸ್ ಮುಖಂಡ ಕೆ.ಎನ್.ಮಂಜುನಾಥ್, ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಮಾಚಾರಿ, ಜನಪದ ಗಾಯಕ ಯಶವಂತ ಹಳಿಬಂಡಿ, ಪ್ರಾಂಶುಪಾಲ ಆರ್.ಕೃಷ್ಣಪ್ಪ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.