ಬೆಂಗಳೂರು: `ಎಲ್ಲಾ ಮಕ್ಕಳಲ್ಲಿಯೂ ಒಂದೊಂದು ಪ್ರತಿಭೆಗಳಿರುತ್ತವೆ. ಅವುಗಳನ್ನು ಗುರುತಿಸುವ ಕಾರ್ಯವಾಗಬೇಕು' ಎಂದು ಶ್ರೀ ಕೃಷ್ಣ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷ ಡಾ.ಎಂ.ರುಕ್ಮಾನಂದ ನಾಯ್ಡು ಹೇಳಿದರು.
ಶ್ರೀ ಕೃಷ್ಣ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ `ಸಾಧನೆ, ಪ್ರತಿಭಾನ್ವೇಷಣೆ -2013' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರಗೆ ತರಲು ಪ್ರತಿಭಾನ್ವೇಷಣೆ ಕಾರ್ಯಕ್ರಮಗಳು ಸಹಾಯಕವಾಗುತ್ತವೆ' ಎಂದರು.
ನಟ ಸಿಹಿಕಹಿ ಚಂದ್ರು ಮಾತನಾಡಿ, `ಅಂತರ್ ಶಾಲಾ ಕಾಲೇಜು ಉತ್ಸವಗಳು ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತವೆ. ಅವರ ಕ್ರಿಯಾಶೀಲತೆ ಇನ್ನು ಹೆಚ್ಚು ಬೆಳೆಯುತ್ತದೆ' ಎಂದರು.
ವಿದ್ಯಾರ್ಥಿಗಳು ತಯಾರಿಸಿದ್ದ ತೂಗು ಸೇತುವೆ, ಆಟದ ಮೈದಾನ, ತರಕಾರಿಗಳಲ್ಲಿ ತಯಾರಿಸಿದ ಪ್ರಾಣಿಗಳ ಪ್ರತಿಕೃತಿ, ಮಾದರಿ ಮನೆಯ ಪ್ರತಿಕೃತಿಗಳ ಪ್ರದರ್ಶನವು ಸಮಾರಂಭವನ್ನು ಕಳೆಗಟ್ಟುವಂತೆ ಮಾಡಿತ್ತು.
ಒಟ್ಟು 48 ಶಾಲೆಗಳ 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ, ನೃತ್ಯ ಸ್ಪರ್ಧೆ, ರಸಪ್ರಶ್ನೆ, ಅಡುಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.