ADVERTISEMENT

ಮಹಾತ್ಮರ ಸ್ಮರಣೆಗೆ ಸ್ವಚ್ಛತಾ ಅಭಿಯಾನ

ವಿವಿಧೆಡೆ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಸಡಗರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 20:19 IST
Last Updated 2 ಅಕ್ಟೋಬರ್ 2017, 20:19 IST
ಜಯನಗರದ ವಿಜಯ ಕಾಲೇಜಿನಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಅವರು ಸಸಿಗೆ ನೀರು ಹಾಕುವ ಮೂಲಕ ಸ್ವಚ್ಛ ಜಯನಗರ ಆಂದೋಲನವನ್ನು ಉದ್ಘಾಟಿಸಿದರು. (ಎಡದಿಂದ) ಎನ್ಎಸ್ಎಸ್ ಯೋಜನಾಧಿಕಾರಿ ಡಾ.ಎಸ್.ಎಲ್.ಮಂಜುನಾಥ್ , ವಿಜಯ ಕಾಲೇಜು ಡೀನ್ ಪ್ರೊ.ಆರ್.ವಿ.ಪ್ರಭಾಕರ್, ಬಿಬಿಎಂಪಿ ಮಾಜಿ ಸದಸ್ಯ ರಾಮಮೂರ್ತಿ, ಶಾಸಕ ಬಿ.ಎನ್.ವಿಜಯ್ ಕುಮಾರ್ ಮತ್ತು ವಿಜಯ ಕಾಲೇಜು ಪ್ರಾಂಶುಪಾಲರಾದ ಪ್ರೊ.ಡಿ.ಆರ್.ಸುಧಾ ಇದ್ದಾರೆ–ಪ್ರಜಾವಾಣಿ ಚಿತ್ರ
ಜಯನಗರದ ವಿಜಯ ಕಾಲೇಜಿನಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಅವರು ಸಸಿಗೆ ನೀರು ಹಾಕುವ ಮೂಲಕ ಸ್ವಚ್ಛ ಜಯನಗರ ಆಂದೋಲನವನ್ನು ಉದ್ಘಾಟಿಸಿದರು. (ಎಡದಿಂದ) ಎನ್ಎಸ್ಎಸ್ ಯೋಜನಾಧಿಕಾರಿ ಡಾ.ಎಸ್.ಎಲ್.ಮಂಜುನಾಥ್ , ವಿಜಯ ಕಾಲೇಜು ಡೀನ್ ಪ್ರೊ.ಆರ್.ವಿ.ಪ್ರಭಾಕರ್, ಬಿಬಿಎಂಪಿ ಮಾಜಿ ಸದಸ್ಯ ರಾಮಮೂರ್ತಿ, ಶಾಸಕ ಬಿ.ಎನ್.ವಿಜಯ್ ಕುಮಾರ್ ಮತ್ತು ವಿಜಯ ಕಾಲೇಜು ಪ್ರಾಂಶುಪಾಲರಾದ ಪ್ರೊ.ಡಿ.ಆರ್.ಸುಧಾ ಇದ್ದಾರೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ನಗರದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.

ಮಹಾತ್ಮರ ಜಯಂತಿ ಅಂಗವಾಗಿ ನಗರದ ವಿವಿಧ ಸ್ಥಳಗಳಲ್ಲಿ ಸಂಘಸಂಸ್ಥೆಗಳು ಸ್ವಚ್ಛತಾ ಅಭಿಯಾನ ನಡೆಸಿದವು.

ಬಿಟಿಎಂ ವಿಧಾನಸಭಾ ಕ್ಷೇತ್ರದ ಈಜೀಪುರ ಬಡಾವಣೆಯ ಇಂದಿರಾ ಗಾಂಧಿ ಕೊಳೆಗೇರಿ ಮತ್ತು ಜಯನಗರ 4ನೇ ಟಿ ಬ್ಲಾಕ್‍ನ 18ನೇ ಮುಖ್ಯ ರಸ್ತೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಭಾಗವಹಿಸಿದ್ದರು. ನಂತರ ಬಡ ಮಕ್ಕಳಿಗೆ ಪುಸ್ತಕ ಹಾಗೂ ಬಡ ಕುಟುಂಬಗಳಿಗೆ ಅಕ್ಕಿ ವಿತರಿಸಿದರು.ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸ್ವಚ್ಛತಾ ಕಾರ್ಯ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ADVERTISEMENT

ಮೆಟ್ರೊ ನಿಲ್ದಾಣ–ಸ್ವಚ್ಛತಾ ಅಭಿಯಾನ: ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮತ್ತು ಇಸ್ಕಾನ್‌ ಸಹಯೋಗದಲ್ಲಿ ನಗರದ 21 ಮೆಟ್ರೊ ನಿಲ್ದಾಣಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. 1,000ಕ್ಕೂ ಹೆಚ್ಚು ಸ್ವಯಂಸೇವಕರು ಅಭಿಯಾನದಲ್ಲಿ ಪಾಲ್ಗೊಂಡರು. ಅಂದಗೆಟ್ಟಿದ್ದ 21 ಮೆಟ್ರೊ ನಿಲ್ದಾಣಗಳ ಸಮೀಪದ ಕಾಂಪೌಂಡ್‌ಗಳಿಗೆ ಬಣ್ಣ ಬಳಿದು ಹೊಸ ರೂಪ ನೀಡಿದರು.

ಪಾಲಿಕೆಯಲ್ಲಿ ಆಚರಣೆ: ಬಿಬಿಎಂಪಿ ಮೇಯರ್‌ ಆರ್‌.ಸಂಪತ್‌ರಾಜ್‌ ಮತ್ತು ಉಪ ಮೇಯರ್‌ ಪದ್ಮಾವತಿ ನರಸಿಂಹ ಮೂರ್ತಿ ಅವರು ಗಾಂಧಿ ವೃತ್ತ ಮತ್ತು ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು.

ಗಾಂಧೀಜಿ ವಿಚಾರಧಾರೆ ಪ್ರಸ್ತುತ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಾ.ಪಿ.ಎಸ್.ಹರ್ಷ ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.