ADVERTISEMENT

ಮೀಟರ್‌ ಬಡ್ಡಿ ವ್ಯವಹಾರ: ಬಿಜೆಪಿ ಮುಖಂಡನ ಬಂಧನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:28 IST
Last Updated 7 ಅಕ್ಟೋಬರ್ 2017, 19:28 IST
ಜೆ.ಪ್ರಕಾಶ್‌
ಜೆ.ಪ್ರಕಾಶ್‌   

ಬೆಂಗಳೂರು: ಅಕ್ರಮವಾಗಿ ಮೀಟರ್‌ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪದಡಿ ಕೆ.ಆರ್‌.ಪುರದ ವಿಧಾನಸಭಾ ಕ್ಷೇತ್ರದ ಬಸವಪುರ ವಾರ್ಡ್‌ನ ಬಿಜೆಪಿ ಮುಖಂಡ ಜೆ.ಪ್ರಕಾಶ್‌ (42) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಎಂಟು ವರ್ಷಗಳಿಂದ ಕೆ.ಆರ್‍.ಪುರ ಹಾಗೂ ಸುತ್ತಮುತ್ತಲ ಪ್ರದೇಶಗಳ ಜನರಿಂದ ಆಸ್ತಿ ಪತ್ರಗಳು, ಖಾಲಿ ಚೆಕ್‍ಗಳನ್ನು ಪಡೆದು ₹100ಕ್ಕೆ ತಿಂಗಳಿಗೆ ಶೇ 15ರಿಂದ 20ರಷ್ಟು ಬಡ್ಡಿಗೆ ಸಾಲ ಕೊಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಮನವಿ ಸಲ್ಲಿಸಿದ್ದರು. ಅದರನ್ವಯ ಕೆ.ಆರ್‌.ಪುರ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

‘ಹಲವು ವರ್ಷಗಳಿಂದ ಬಡ್ಡಿ ವ್ಯವಹಾರ ನಡೆಸುತ್ತಿರುವ ಪ್ರಕಾಶ್‌, ತಿಂಗಳಿಗೆ ₹1.5 ಲಕ್ಷ ಬಡ್ಡಿ ಸಂಪಾದಿಸುತ್ತಿದ್ದರು. ಬಡ್ಡಿ ನೀಡದವರಿಗೆ ಕಿರುಕುಳ ನೀಡುತ್ತಿದ್ದರು. ಈಗ ಆತನ ಬಳಿಯಿಂದ ಹಲವರ ಆಸ್ತಿ ಪತ್ರಗಳು, ಚೆಕ್‌ ಪುಸ್ತಕಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಬಿಜೆಪಿಗೆ ಸೇರಿದ್ದಕ್ಕೆ ಬಂಧನ: ಬಂಧನವನ್ನು ಖಂಡಿಸಿರುವ ಬಿಜೆಪಿ ಮುಖಂಡ ಮುಖಂಡ ದೇವೆಂದ್ರ, ‘ಇತ್ತೀಚೆಗಷ್ಟೆ ಕಾಂಗ್ರೆಸ್‌ನಿಂದ ಹೊರಬಂದಿದ್ದ ಪ್ರಕಾಶ್, ಬಿಜೆಪಿಗೆ ಸೇರಿದ್ದರು. ಇದೇ ಕಾರಣಕ್ಕೆ ಮೀಟರ್ ಬಡ್ಡಿ ವ್ಯವಹಾರ ಹೆಸರಿನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧಿಸಲಾಗಿದೆ. ಇದರಿಂದ ಹಿಂದೆ ರಾಜಕೀಯ ಷಡ್ಯಂತ್ರವಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.