ಯಲಹಂಕ: ಬಾಗಲೂರು ವ್ಯಾಪ್ತಿಯ ರಜಾಕ್ಪಾಳ್ಯ, ಬುಡನ್ಸಾಬ್ಪಾಳ್ಯ ಮತ್ತು ಮಸ್ತಾನ್ಸಾಬ್ ಪಾಳ್ಯ ಗ್ರಾಮಗಳಲ್ಲಿ ‘ಆಫ್ರಿಕನ್ ಕ್ಯಾಟ್ಫಿಷ್’ ಮೀನು ಸಾಕಾಣಿಕೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಬಗ್ಗೆ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಬೆಂಗಳೂರು ಉತ್ತರ (ಹೆಚ್ಚುವರಿ) ತಹಸೀಲ್ದಾರ್ ಬಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಈ ಮೂರು ಗ್ರಾಮಗಳಲ್ಲಿ ಆಫ್ರಿಕನ್ ಕ್ಯಾಟ್ಫಿಷ್ ಎಂಬ ರಾಕ್ಷಸಿ ಜಾತಿಯ ಮೀನು ಸಾಕಾಣಿಕೆ ಕೇಂದ್ರಗಳನ್ನು ರದ್ದುಪಡಿಸುವ ಬಗ್ಗೆ ಈಗಾಗಲೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಗಳು, ದಂಡಪ್ರಕ್ರಿಯೆ ಸಂಹಿತೆ ಕಲಂ-133 ರಡಿಯಲ್ಲಿ ಆದೇಶ ಹೊರಡಿಸಿರುವುದರ ಜೊತೆಗೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಸಭೆಯನ್ನು ಕರೆಯಲಾಗಿತ್ತು.
ನಗರದಿಂದ ಕೋಳಿ ತ್ಯಾಜ್ಯ ತಂದು ಹೊಂಡಗಳಲ್ಲಿ ಅನಧಿಕೃತವಾಗಿ ಮೀನು ಸಾಕಾಣಿಕೆ ಮಾಡುತ್ತಿರುವ ಪರಿಣಾಮ ಗ್ರಾಮಗಳಲ್ಲಿ ನೀರು ಕಲುಷಿತವಾಗುತ್ತಿದ್ದು, ಇದರಿಂದ ಜನರ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮೀನುಗಾರಿಕಾ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಸಹಾಯಕ ನಿರ್ದೇಶಕ ಸಿದ್ದಯ್ಯ ಮತ್ತು ಬಾಗಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ ಅವರು, ಮೀನು ಸಾಕಾಣಿಕೆಯನ್ನು ರದ್ಧುಪಡಿಸಬೇಕೆಂದು ಈಗಾಗಲೆ ಮೀನು ಸಾಕಾಣಿಕೆದಾರರಿಗೆ ನೋಟಿಸ್ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ಸಭೆಗೆ ತಿಳಿಸಿದರು.
ವಾರದಲ್ಲಿ ಮೂರು ದಿನ ಇಲಾಖೆವಾರು ಅಧಿಕಾರಿಗಳು ಜಂಟಿ ಭೇಟಿನೀಡಿ, ಮೀನುಸಾಕಾಣಿಕೆಯನ್ನು ರದ್ದುಪಡಿಸಲು ಒತ್ತಡ ಹೇರಬೇಕು ಮತ್ತು ಪೊಲೀಸ್ ಇಲಾಖೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ, ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಬೇಕು ಎಂದು ಸೂಚಿಸಿದ ತಹಸೀಲ್ದಾರ್ ಬಿ.ವೆಂಕಟೇಶ್ ಅವರು, ಮೀನು ಸಾಗಾಣಿಕೆಗೆ ಬಳಸುವ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಮೀನು ಸಾಕಾಣಿಕೆದಾರರ ವಿರುದ್ಧ ದೂರು ದಾಖಲಿಸಬೇಕು ಎಂದು ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಮೀನು ಮತ್ತು ಅವುಗಳಿಗೆ ಸರಬರಾಜಾಗುವ ಆಹಾರದ ಪೂರೈಕೆಯನ್ನು ತಡೆಗಟ್ಟಲು ಮತ್ತೊಮ್ಮೆ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲು ಎಲ್ಲಾ ಇಲಾಖೆಗಳಿಂದ ಕ್ರಮ ಕೈಗೊಳ್ಳಲು ಮತ್ತು ಹೊಂಡಗಳಿಗೆ ಅನಧಿಕೃತವಾಗಿ ಪಡೆದಿರುವ ವಿದ್ಯುತ್ ಸಂರ್ಕವನ್ನು ಸ್ಥಗಿತ ಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ, ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಪಡೆದು ಏಳು ದಿನಗಳಿಗೆ ಮುಂಚಿತವಾಗಿ ಮೇಲ್ಕಂಡ ಗ್ರಾಮಗಳಲ್ಲಿ ಪಂಚಾಯಿತಿ ವತಿಯಿಂದ ಡಂಗೂರದ ಮೂಲಕ ಪ್ರಚಾರಮಾಡಿ ನೋಟಿಸ್ ನೀಡಲು ನಿರ್ಧರಿಸಲಾಯಿತು.ಬಾಗಲೂರು ಠಾಣೆಯ ಇನ್ಸ್ಪೆಕ್ಟರ್ ಬಿ.ಪಿ.ಪ್ರಸಾದ್, ಬೆಂಗಳೂರು ಉತ್ತರ ತಾಲ್ಲೂಕು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜು, ರಾಜಸ್ವ ನಿರೀಕ್ಷಕ ಮಹೇಶ್, ಗ್ರಾಮಲೆಕ್ಕಿಗ ಅಶ್ವಥನಾರಾಯಣ ಮೊದಲಾದ ವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.