ADVERTISEMENT

ಮುಂದಿನ ತಲೆಮಾರಿಗೆ ಹಳಗನ್ನಡ ತಲುಪಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಂಗಳೂರು: `ಅಧ್ಯಾಪಕರು ಹೆಚ್ಚು ಅಧ್ಯಯನಶೀಲರಾಗುವ ಮೂಲಕ ಹಳೆಗನ್ನಡವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಮಾಡಬೇಕು' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕ ಕ್ಷೇಮಾಭಿವೃದ್ಧಿ ಸಂಘವು ಜಯನಗರದ ವಿಜಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪ್ರೊ.ಕೆ.ಸುಜಾತ ಅವರ `ಭರವಸೆಯ ಈ ಪರಿ' ಕವನ ಸಂಕಲನ ಮತ್ತು `ಕನ್ನಡ ಅಧ್ಯಯನ ಪತ್ರಿಕೆ' ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಗದಾಯುದ್ಧ ಸಂಗ್ರಹ'ದಂತಹ  ಹಳೆಗನ್ನಡದ ಕೃತಿಗಳನ್ನು ಅಧ್ಯಯನ ಮಾಡಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ಈ ಮೂಲ ಹಳೆಗನ್ನಡವನ್ನು ಉಳಿಸುವ ಕೆಲಸ ಮಾಡಬೇಕು' ಎಂದರು.

`ಕನ್ನಡ ಭಾಷೆಯನ್ನು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಭಾಷೆಯನ್ನಾಗಿ ಬೆಳೆಸಬೇಕು. ಸರ್ಕಾರವು ಮಂಜೂರು ಮಾಡಲಿರುವ ಏಳು ನೂತನ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು' ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಿ.ಎನ್.ವೆಂಕಟರಾವ್, ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಕನ್ನಡ ಪರೀಕ್ಷಾ ಮಂಡಲಿಯ ಅಧ್ಯಕ್ಷೆ ಪ್ರೊ.ಸಿ.ಪ್ರಭಾವತಿ, ಸಂಘದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಕಾರ್ಯದರ್ಶಿ ಶಾಂತರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT