ADVERTISEMENT

ಮುತ್ತು ಕೊಟ್ಟವನ ಬಂಧನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 20:00 IST
Last Updated 7 ಏಪ್ರಿಲ್ 2018, 20:00 IST

ಬೆಂಗಳೂರು: ಎಚ್‌ಎಎಲ್‌ ಸಮೀಪದ ವಿಜ್ಞಾನ ನಗರದಲ್ಲಿ 18 ವರ್ಷದ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಶಿಯಾಬ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ನೀಡಿದ್ದ ದೂರಿನಡಿ ಎಫ್‌ಐಆರ್‌ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಎರಡು ವರ್ಷದ ಹಿಂದಷ್ಟೇ ನಗರಕ್ಕೆ ಬಂದಿದ್ದ ಕೇರಳ ಮೂಲದ ಶಿಯಾಬ್‌, ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದಾನೆ ಎಂದು ಎಚ್‌ಎಎಲ್‌ ಠಾಣೆಯ ಪೊಲೀಸರು ತಿಳಿಸಿದರು.

ಯುವತಿ ವಾಸವಿರುವ ಮನೆಯ ಪಕ್ಕವೇ ಆರೋಪಿ ನೆಲೆಸಿದ್ದಾನೆ. ಏಪ್ರಿಲ್‌ 5ರಂದು ಯುವತಿ ಮನೆಯಲ್ಲಿ ಒಬ್ಬಳೇ ಇರುವುದನ್ನು ತಿಳಿದ ಆರೋಪಿ ಅವರ ಮನೆಗೆ ಹೋಗಿದ್ದಾನೆ. ಪರಿಚಯ ಇದ್ದಿದ್ದರಿಂದ ಯುವತಿ ಆತನನ್ನು ಮಾತನಾಡಿಸಿದ್ದಾಳೆ. ಕೆಲಹೊತ್ತು ಮಾತನಾಡಿದ ಆರೋಪಿ, ಕುಡಿಯಲು ನೀರು ಕೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ನೀರು ತರಲು ಅಡುಗೆ ಕೋಣೆಗೆ ಹೋಗಿದ್ದ ಯುವತಿಯನ್ನು ಹಿಂಬಾಲಿಸಿದ ಆರೋಪಿ, ಅದೇ ಕೋಣೆಯಲ್ಲೇ ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಗಾಬರಿಗೊಂಡ ಸಂತ್ರಸ್ತೆ, ಸಹಾಯಕ್ಕಾಗಿ ಕಿರುಚಾಡಿದ್ದರು. ಅಕ್ಕ–‍ಪಕ್ಕದ ನಿವಾಸಿಗಳು ಸ್ಥಳಕ್ಕೆ ಬರುವಷ್ಟರಲ್ಲೇ ಆರೋಪಿ ಪರಾರಿಯಾಗಿದ್ದ. ನಂತರ, ತಂಡ ರಚಿಸಿ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.