ADVERTISEMENT

ಮುನಿರತ್ನ ವಿರುದ್ಧ ದೋಷಾರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:29 IST
Last Updated 9 ಮಾರ್ಚ್ 2018, 19:29 IST

ಬೆಂಗಳೂರು: 2008ರಿಂದ 2012ರವರೆಗೆ ನಗರದಲ್ಲಿ ಕೈಗೊಂಡಿದ್ದ 285 ಕಳಪೆ ಕಾಮಗಾರಿಗಳಿಗೆ ನಕಲಿ ಬಿಲ್‌ ಸೃಷ್ಟಿಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು, ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಮತ್ತು ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಕಾಮಗಾರಿಗಳು ಕಳಪೆಯಾಗಿದ್ದವು. ನಕಲಿ ಬಿಲ್ ಸೃಷ್ಟಿಸಿದ್ದ ಆರೋಪಿಗಳು, ₹1,539 ಕೋಟಿ ಮೊತ್ತವನ್ನು ಮಂಜೂರು ಮಾಡಿಸಿಕೊಂಡಿದ್ದರು. ಆ ಬಗ್ಗೆ ತನಿಖೆ ನಡೆಸಿದ್ದ ಅಂದಿನ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರು ಕಾರ್ಯಪಾಲಕ ಎಂಜಿನಿಯರ್‌ಗಳಾದ (ನಿವೃತ್ತ) ಬಿ.ಜಿ.ಪ್ರಕಾಶ್‌ ಕುಮಾರ್‌, ವೈ.ಎಂ.ಮುನಿರಾಜು, ಸಹಾಯಕ ಎಂಜಿನಿಯರ್‌ ಎಂ.ಕೆ. ಹರೀಶ್ ಹಾಗೂ ಶಾಸಕ ಮುನಿರತ್ನ ವಿರುದ್ಧ ಬಿಎಂಟಿಎಫ್‌ (ಬೆಂಗಳೂರು ಮಹಾನಗರ ಕಾರ್ಯಪಡೆ) ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿ ಆರೋಪಿಗಳು ಜಾಮೀನು ಸಹ ಪಡೆದುಕೊಂಡಿದ್ದರು.

ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದರಿಂದ, ತನಿಖೆ ಜವಾಬ್ದಾರಿಯನ್ನು ಸಿಐಡಿಗೆ ವಹಿಸಲಾಗಿತ್ತು. ಏಳು ವರ್ಷಗಳವರೆಗೆ ತನಿಖೆ ನಡೆಸಿದ ಸಿಐಡಿ, ಫೆ. 23ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

ADVERTISEMENT

‘ಒಂದೊಂದು ಕಾಮಗಾರಿ ಬಗ್ಗೆಯೂ ಪ್ರತ್ಯೇಕವಾಗಿ 90 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮಾಡಿದ್ದೇವೆ. ಇದು ನಗರದ ಬಹುದೊಡ್ಡ ಹಗರಣ ಆಗಿದೆ. ಸದ್ಯದಲ್ಲೇ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.